ಭಾನುವಾರ, ಏಪ್ರಿಲ್ 25, 2021

ಭಾವಾನುವಾದ- ಅಧ್ಯಾಯ ೦೧

 

ಭಾವಾನುವಾದ- ಅಧ್ಯಾಯ ೦೧

 

̐

ಬ್ರಹ್ಮವಾದಿನೋ ವದನ್ತಿ ಕಿಂ ಕಾರಣಂ ಬ್ರಹ್ಮ ಕುತಃ ಸ್ಮ ಜಾತಾ ಜೀವಾಮ ಕೇನ ಕ್ವ ಚ ಸಂಪ್ರತಿಷ್ಠಾಃ

ಅಧಿಷ್ಠಿತಾಃ ಕೇನ ಸುಖೇತರೇಷು ವರ್ತ್ತಾಮಹೇ ಬ್ರಹ್ಮವಿದೋ ವ್ಯವಸ್ಥಾಮ್ ೦೧.೦೧

 

ಮೊದಲನೇ ಮಂತ್ರ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಾಯಃ ಒಬ್ಬ ಚಿಂತನಾಶೀಲ ಮನುಷ್ಯ ತನ್ನ ಜೀವನದಲ್ಲಿ ಯಾವ ಪ್ರಶ್ನೆಗೆ ಉತ್ತರವನ್ನು ನಿರಂತರ ಹುಡುಕುತ್ತಾನೋ, ಅದೇ ಪ್ರಶ್ನೆಯನ್ನು  ಈ ಉಪನಿಷತ್ತು ಮೊದಲು ನಮ್ಮ ಮುಂದಿಡುತ್ತದೆ. ಹಾಗಾಗಿ ಇದು ಎಲ್ಲಾ ಕಾಲದಲ್ಲೂ, ಎಲ್ಲಾ ಜನರಿಗೂ  ಪ್ರಸ್ತುತವಾದ ವಿಷಯವಾಗಿದೆ. ‘ಬ್ರಹ್ಮವಾದಿನೋ ವದಂತಿ‘ ಇಲ್ಲಿ ಪ್ರಶ್ನೆ ಮಾಡುತ್ತಿರುವವರು ‘ಬ್ರಹ್ಮವಾದಿಗಳು’. ಪ್ರಶ್ನಿಸುತ್ತಿರುವುದು ‘ಬ್ರಹ್ಮವಿದರನ್ನು. 

ಇಲ್ಲಿ ಪ್ರಶ್ನೆ ಮಾಡುತ್ತಿರುವ ಬ್ರಹ್ಮವಾದಿಗಳು ಯಾರು ಎನ್ನುವುದನ್ನು ನಾವು ಈ ಪದದಿಂದಲೇ ತಿಳಿಯಬೇಕು.   ‘ಬ್ರಹ್ಮ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಅನೇಕ ಮಜಲಿನಲ್ಲಿ ಬೇರೆಬೇರೆ ಅರ್ಥಗಳಿವೆ. ಸಾಮಾನ್ಯವಾಗಿ ‘ಬ್ರಹ್ಮ ಎಂದರೆ ‘ದೊಡ್ಡದು ಎಂದರ್ಥ. ಹಾಗಾಗಿ ಬ್ರಹ್ಮವಾದಿಗಳು ಎಂದರೆ ಅತ್ಯಂತ ಮಹತ್ವದ ವಿಷಯದ ಕುರಿತು ಚಿಂತನೆ ಮಾಡುವವರು ಅಥವಾ ವೇದಾರ್ಥ ಚಿಂತಕರು ಎಂದರ್ಥ.

ವೇದಾರ್ಥ ಚಿಂತನೆ ಎಂದಾಗ ನಮಗೊಂದು ಪ್ರಶ್ನೆ ಬರುತ್ತದೆ. ‘ಸಂಸ್ಕೃತ ಬಲ್ಲವರಿಗೆ ವೇದ ಅರ್ಥವಾಗಬೇಕಲ್ಲವೇ? ಅದನ್ನು ಮರಳಿ ಚಿಂತನೆ ಮಾಡುವ ಅಗತ್ಯವೇನಿದೆ?  ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟಾಗ ನಮಗೆ ತಿಳಿಯುವುದೇನೆಂದರೆ: ಸಂಸ್ಕೃತ ಭಾಷೆ ತಿಳಿಯದವರಿಗೆ ವೇದದ ಅರ್ಥವನ್ನು ಸ್ವಾಧ್ಯಾಯದಿಂದ ತಿಳಿಯುವುದು ಖಂಡಿತ ಸಾಧ್ಯವಿಲ್ಲ. ಆದರೆ ಸಂಸ್ಕೃತ ತಿಳಿದ ಪ್ರಾಚೀನರಿಗೂ ಕೂಡಾ ವೇದ ಸರಿಯಾಗಿ ಅರ್ಥವಾಗುತ್ತಿರಲಿಲ್ಲ ಎನ್ನುವ ಸತ್ಯ.  ಇದಕ್ಕೆ ಕಾರಣ ವೇದದ ಭಾಷೆ. ಅದು ಪ್ರಸಕ್ತ ಮಾತನಾಡುವ ಸಂಸ್ಕೃತಕ್ಕಿಂತ ತೀರಾ ಭಿನ್ನ. ಯಾವ ರೀತಿ ಕನ್ನಡದಲ್ಲಿ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಇತ್ಯಾದಿ ಬದಲಾವಣೆಗಳನ್ನು ನಾವು ಕಾಣುತ್ತೇವೋ, ಹಾಗೇ ಸಂಸ್ಕ್ರತದಲ್ಲೂ ಕೂಡಾ ಮಹತ್ತರವಾದ ಬದಲಾವಣೆಗಳಾಗಿವೆ.  ಯಾವ ಕಾಲದಲ್ಲಿ ಆ ಬದಲಾವಣೆ ಆಗಿದೆ ಎನ್ನುವುದು ತಿಳಿದಿಲ್ಲ. ಹೀಗಾಗಿ ಸಂಸ್ಕೃತ ಪಂಡಿತರಿಗೂ ಕೂಡಾ ವೇದದ ಭಾಷೆ ಅರ್ಥೈಸುವುದು ಕಷ್ಟದ ಕೆಲಸ. ಅಷ್ಟೇ ಅಲ್ಲಾ, ವೇದದಲ್ಲಿ ಹೇಳುವ ವಿಷಯ ನಮ್ಮ ಅರಿವಿನ ಕ್ಷೇತ್ರದಿಂದ ಆಚೆಗಿನದು. ಹಾಗಾಗಿ ವೇದ ಹೇಳುವ ಸಂಗತಿಗಳಲ್ಲಿ ಪ್ರವೇಶ ಇದ್ದು, ಅದರ ಬಗ್ಗೆ ಚಿಂತನೆ ಮಾಡಿದವರಿಗೆ ಮಾತ್ರ ವೇದ ಅರ್ಥವಾಗುತ್ತದೆ. ಹೀಗಾಗಿ ವೇದ ಏನನ್ನು ಹೇಳುತ್ತದೆ ಎಂದು ವಿಶೇಷವಾಗಿ ಅಧ್ಯಯನ ಮಾಡುವವರು ಹುಟ್ಟಿಕೊಂಡರು. ಇವರಲ್ಲಿ ವೇದವಾದಿಗಳು ಎಂದರೆ ವೇದದ ಮೇಲ್ನೋಟದ ಅರ್ಥತಿಳಿದು ಚರ್ಚೆ ಮಾಡುವವರು. ಬ್ರಹ್ಮವಿದರು ಎಂದರೆ ವೇದದ ಆಳಕ್ಕಿಳಿದು ಅದರ ಅರ್ಥವನ್ನು ತಿಳಿಯುವವರು. ನಮಗೆ ಅಪರಿಚಿತವಾದ ವಿಷಯವನ್ನು ಹೇಳುವ ವೇದವನ್ನು ಅಧ್ಯಯನಮಾಡಿ, ಅಲ್ಲಿ ಹೇಳಿದ ಸಂಗತಿಯನ್ನು ಅನುಭವಿಸಿ, ಅದರಲ್ಲಿ ಮುಂದುವರಿದು, ಚರ್ಚೆಯನ್ನು ಬೆಳೆಸಿಕೊಂಡು,  ಅದರಿಂದ ಸಾಕ್ಷಾತ್ಕಾರ ಪಡೆಯತಕ್ಕಂತಹ ದೊಡ್ಡ ಪರಂಪರೆ ಈ ಬ್ರಹ್ಮವಿದರದ್ದು.

‘ವಾದ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ವಿಶಿಷ್ಟವಾದ ಅರ್ಥವಿದೆ.  ನಾವು ಏನನ್ನು ಅನುಭವಿಸಿದ್ದೇವೆ, ಆ ಅನುಭವವನ್ನು ಹಂಚಿಕೊಳ್ಳುವುದು ಮತ್ತು ಪರಸ್ಪರ ಅರಿವನ್ನು ಬೆಳೆಸಿಕೊಳ್ಳುವುದು ವಾದ. ಅಂದರೆ ಇಬ್ಬರು ಅನುಭವಿಗಳು ತಮ್ಮ ಅನುಭವವನ್ನು ಪರಸ್ಪರ ಹಂಚಿಕೊಂಡು  ಬೆಳೆಯುವುದೇ ವಾದ. ಕನ್ನಡದಲ್ಲಿ  ವಾದ ಎನ್ನುವ ಪದವನ್ನು  ವ್ಯತಿರಿಕ್ತ ಅರ್ಥದಲ್ಲಿ ಬಳಸುತ್ತಾರೆ.  ಅನುಭವ ಇಲ್ಲದವರು ಪರಸ್ಪರ ಸೇರಿ ಜಗಳವಾಡುವುದನ್ನು ಜನರು ವಾದ ಎಂದು ಪರಿಗಣಿಸುತ್ತಾರೆ. ಆದರೆ  ಬ್ರಹ್ಮವಿದರು ವೇದದ ವಿಶೇಷ ಅಧ್ಯಯನಮಾಡಿ, ತಮ್ಮ ಅನುಭಾವದೊಂದಿಗೆ ಚರ್ಚಿಸುತ್ತಾರೆ. ಅಂತಹ  ವಾದ  ಗುರು ಶಿಷ್ಯರ ನಡುವೆ ನಡೆಯಬಹುದು. ಅಲ್ಲಿ ಸೋಲು-ಗೆಲುವಿನ ಪ್ರಶ್ನೆಯೇ ಇಲ್ಲ. ಶಿಷ್ಯನಿಂದ ಗುರು ಕಲಿಯಬಹುದು, ಗುರುವಿನಿಂದ ಶಿಷ್ಯ ಕಲಿಯಬಹುದು. ಯಾರಿಗೆ ವಿಷಯದಲ್ಲಿ ಹೆಚ್ಚು ಅನುಭಾವವಿದೆ, ಅದನ್ನು ಅವರು ಹಂಚಿಕೊಳ್ಳುತ್ತಾರೆ ಅಷ್ಟೇ. ಹೀಗಾಗಿ ವಾದದ ಮುಖ್ಯ ಉದ್ದೇಶ ಜ್ಞಾನದ ವಿಕಾಸವೇ ಹೊರತು ಸೋಲು-ಗೆಲುವಿನ ಪ್ರಶ್ನೆ ಅಲ್ಲಿಲ್ಲ. ಹೀಗೆ ಜೀವನದ ಮಹತ್ತರವಾದ ಸಂಗತಿಯ ಬಗ್ಗೆ ವೇದದಲ್ಲಿ ಏನು ಹೇಳಿದ್ದಾರೆ, ಅದರಲ್ಲಿ  ನಾವು ಎಷ್ಟು ಅಂಶ ಅನುಭವಿಸಬಹುದು  ಎಂದು ತಮ್ಮ ಅನುಭವನ್ನು ಹಂಚಿಕೊಳ್ಳುವುದಕ್ಕಾಗಿ ಸೇರಿದ ಈ ಬ್ರಹ್ಮವಾದಿಗಳು ಪ್ರಶ್ನೆಯ ಮೂಲಕ ತಮ್ಮ ಚಿಂತನೆಯನ್ನು ಇಲ್ಲಿ  ಪ್ರಾರಂಭಿಸಿದ್ದಾರೆ.

‘ಕಿಂ ಕಾರಣಂ ಬ್ರಹ್ಮ ಕುತಃ ಸ್ಮ ಜಾತಾ  ಜೀವಾಮ ಕೇನ’ ‘ಈ ಪ್ರಪಂಚವನ್ನು ಯಾರು ಸೃಷ್ಟಿ ಮಾಡಿದರು ಮತ್ತು ಏಕೆ ಸೃಷ್ಟಿ ಮಾಡಿದರು’ ಎನ್ನುವುದು ಅವರ ಪ್ರಶ್ನೆಯ ಮೊದಲ ಭಾಗ. ಈ ಪ್ರಶ್ನೆಗೆ ಉತ್ತರ ರೂಪವಾಗಿ ‘ಬ್ರಹ್ಮ ಕಾರಣವೋ ಎಂದು ಅವರೇ ಕೇಳಿಕೊಂಡಿದ್ದಾರೆ ಕೂಡ.  ‘ಬ್ರಹ್ಮ’ ಎಂದರೆ ಈ ಪ್ರಪಂಚಕ್ಕಿಂತ ಕಾಲತಃ ಮೊದಲಿದ್ದ ಎಲ್ಲಕ್ಕಿಂತ ದೊಡ್ಡವನು. ಯಾರವನು?  ಏಕೆ ಹುಟ್ಟಿದವು ಈ ಎಲ್ಲಾ ಜೀವಜಾತಗಳು? ಹುಟ್ಟಲು ಬಯಸಿ ನಾವು ಹುಟ್ಟುವುದಿಲ್ಲ, ಸಾಯಲು ಬಯಸಿ ಸಾಯುವುದಿಲ್ಲ. ಹಾಗಾದರೆ ಈ ಹುಟ್ಟು-ಸಾವಿನ ವ್ಯವಸ್ಥೆ ಯಾರದ್ದು? ಯಾರಿಂದ ಹುಟ್ಟಿದೆವು ಮತ್ತು ಯಾಕಾಗಿ ಹುಟ್ಟಿದೆವು ? ಯಾವ ದೊಡ್ಡ ವಸ್ತು (ಬ್ರಹ್ಮ) ಜಗತ್ತಿನ ಮೂಲದಲ್ಲಿ ಇತ್ತೋ, ಅದು ಎಲ್ಲಾ ಕಾಲದಲ್ಲೂ ಇರುವಂತದ್ದಾಗಿರಬೇಕು. ಎಲ್ಲವನ್ನೂ ತಿಳಿದಿರುವಂತದ್ದಾಗಿರಬೇಕು. ಎಲ್ಲವನ್ನೂ ಮಾಡಬಲ್ಲದ್ದಾಗಿರಬೇಕು. ಅಂದರೆ ಅದು ಸರ್ವಜ್ಞ, ಸರ್ವಶಕ್ತ, ಸರ್ವಗತವಾಗಿರಬೇಕಲ್ಲವೇ? ಈ ರೀತಿ ಸೃಷ್ಟಿಮಾಡಿದ ಆ ಶಕ್ತಿ  ಎಲ್ಲವನ್ನೂ ಏಕೆ ಒಂದೇ ರೀತಿ  ಸೃಷ್ಟಿ ಮಾಡಲಿಲ್ಲ? ಕೆಲವೊಮ್ಮೆ ಸುಖ, ಕೆಲವೊಮ್ಮೆ ದುಃಖ, ಕೆಲವರು ಸಿರಿವಂತರು, ಇನ್ನು ಕೆಲವರು ಬಡವರು. ಏಕೆ ಇಂತಹ ವೈವಿಧ್ಯತೆ?  ಕೇವಲ ಹುಟ್ಟು ಸಾವು ಮಾತ್ರವಲ್ಲ, ಹುಟ್ಟು-ಸಾವಿನ ನಡುವಿನ ಬದುಕೂ ಕೂಡಾ ನಮ್ಮ ಅಧೀನದಲ್ಲಿಲ್ಲ. ಬದುಕು ಎಂದರೆ ಅದು ಎಚ್ಚರ, ಕನಸು, ನಿದ್ದೆ.  ಎಚ್ಚರದಲ್ಲಿ ನಡೆಯುವ ಕ್ರಿಯೆ ನಮ್ಮ ಅಧೀನವೇ? ಖಂಡಿತವಾಗಿ ಇಲ್ಲ. ಉದಾಹರಣೆಗೆ-ನಾವು ಒಂದು ಹೂವಿನ ಅಂದವನ್ನು ಕಣ್ಣಿನಿಂದ ಸವಿಯುತ್ತೇವೆ, ಅದರ ಪರಿಮಳವನ್ನು ಮೂಗಿನಿಂದ ಆಸ್ವಾದಿಸುತ್ತೇವೆ, ಆ ಹೂವನ್ನು ಮುಟ್ಟಿ-ಮುಡಿದು ಸಂತೋಷಪಡುತ್ತೇವೆ. ಈ ಹೂವನ್ನು ಸೃಷ್ಟಿಸಿದವನ್ಯಾರು? ಅದಕ್ಕೆ ಅಂದವನ್ನು ಕೊಟ್ಟವನ್ಯಾರು? ಆ ಹೂವನ್ನು  ನೋಡುವ ಕಣ್ಣನ್ನು ನಮಗೆ ಕೊಟ್ಟವನ್ಯಾರು? (ಹುಟ್ಟು ಕುರುಡನಿಗೆ ನೋಡುವ ಯೋಗವಿಲ್ಲ). ಹೀಗಾಗಿ ನೋಡುವ-ಮುಟ್ಟುವ-ಮೂಸುವ ಕ್ರಿಯೆಯಲ್ಲಿ ಯಾವುದೂ ನಮ್ಮ ಅಧೀನದಲಿಲ್ಲ. ಅಂದರೆ  ನಮಗೆ ಇಚ್ಛಾ ಸ್ವಾತಂತ್ರ್ಯವಿಲ್ಲ. ಇನ್ನು ಕನಸು. ಆ ಕನಸನ್ನು ನಮಗೆ ತೋರಿಸುವ ಶಕ್ತಿ ಯಾವುದು? ನಾವು ಬಯಸಿದ ಕನಸನ್ನು ನಾವು ಕಾಣಲು ಸಾಧ್ಯವೇ?  ನಿದ್ರೆಯಲ್ಲಂತೂ  ನಮಗೆ ಏನೂ ಗೊತ್ತಿರುವುದಿಲ್ಲ. ಹೀಗಾಗಿ ನಮ್ಮ ಬದುಕು, ನಮ್ಮ ಚಿಂತನೆ , ನಮ್ಮ ಯೋಚನೆ, ಇದನ್ನೆಲ್ಲವನ್ನೂ ನಿಯಂತ್ರಿಸುವ ಶಕ್ತಿಯೊಂದಿದೆ. ಅದು ಯಾವುದು? ನಾವು ಎಲ್ಲಿಂದ ಬಂದಿರುವುದು? ಇಲ್ಲಿ ಏಕೆ ಹುಟ್ಟಿದೆವು? ಏತಕ್ಕಾಗಿ ಹೀಗೆ ಬದುಕುತ್ತಿದ್ದೇವೆ ? ಕೊನೆಗೆ ಎಲ್ಲವನ್ನೂ ಕಳಚಿಕೊಂಡು ಎಲ್ಲಿಗೆ ಹೋಗುವೆವು?  ಕ್ವ ಚ ಸಮ್ಪ್ರತಿಷ್ಠಾಃ’ ನಮ್ಮ ಪಯಣದ ಕೊನೇ ನಿಲ್ದಾಣ(ಗುರಿ) ಯಾವುದು? ಇದು ನಮ್ಮ ನಿಮ್ಮೆಲ್ಲರ ಪ್ರಶ್ನೆ. ಅದನ್ನೇ ಇಲ್ಲಿ ಬ್ರಹ್ಮವಾದಿಗಳು ಕೇಳಿದ್ದಾರೆ.

‘ಅಧಿಷ್ಠಿತಾಃ ಕೇನ ಸುಖೇತರೇಷು ವಾರ್ತ್ತಾಮಹೇ ಬ್ರಹ್ಮವಿದೋ ವ್ಯವಸ್ಥಾಮ್’  ನಾವು ಇಲ್ಲಿ ಬದುಕಿರುವಾಗ ಯಾರೂ ಕೂಡಾ ಕೇವಲ ಸುಖದಲ್ಲಿರುವುದಿಲ್ಲ. ಸುಖ ಬೇಕು ಎಂದು ಬಯಸುತ್ತೇವೆ ಆದರೆ ಕೆಲವೊಮ್ಮೆ ದುಃಖವನ್ನು ಪಡೆಯುತ್ತೇವೆ. ಮನುಷ್ಯಜೀವನದಲ್ಲಿ ಸುಖವಿದೆ ಜೊತೆಗೆ ‘ಇತರವೂ’ ಇದೆ. ನಾವು ಅದರಲ್ಲೇ ಅಧಿಷ್ಠಿತರಾಗಿದ್ದೇವೆ. ಬದುಕಿನ ಈ ವ್ಯವಸ್ಥೆ ನಮಗೆ ಅಭ್ಯಾಸವಾಗಿ ಹೋಗಿದೆ. ಏಕೆ ಈ ವ್ಯವಸ್ಥೆ? ಇದನ್ನು ಮಾಡಿದ ವ್ಯವಸ್ಥಾಪಕನಾರು? ಏನು ಈ ವ್ಯವಸ್ಥೆಯ ಅರ್ಥ? ‘ಎಲೈ ಬ್ರಹ್ಮವಿದರೇ, ನೀವು ವೇದಾರ್ಥ ಚಿಂತನೆ ಮಾಡುವ ಅನುಭವಶಾಲಿಗಳು. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದಕ್ಕಾಗಿ ನಾವು ಈ ಪ್ರಶ್ನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ’ ಎನ್ನುತ್ತಾ, ಮನುಕುಲಕ್ಕೆ ಕಾಡುವ ಪ್ರಶ್ನೆಯನ್ನು ಬ್ರಹ್ಮವಾದಿಗಳು ಬ್ರಹ್ಮವಿದರ ಮುಂದಿಟ್ಟಿದ್ದಾರೆ.

(ಮೊದಲನೇ ಮಂತ್ರದಲ್ಲಿ ಕೇಳಲಾದ ಪ್ರಶ್ನೆಗೆ ಮನುಷ್ಯನ ಬುದ್ಧಿ ಯೋಚಿಸಬಹುದಾದ ಉತ್ತರಗಳನ್ನೆಲ್ಲವನ್ನೂ ವಿಶ್ಲೇಷಿಸಿ, ಅದ್ಯಾವುದೂ ಸೃಷ್ಟಿಗೆ ಮೂಲಕಾರಣ ಅಲ್ಲಾ ಎನ್ನುವ ತೀರ್ಮಾನಕ್ಕೆ ಋಷಿಗಳು ಬರುತ್ತಾರೆ. ಆ  ವಿವರಣೆಯನ್ನು ನಾವು ಮುಂದಿನ ಮಂತ್ರದಲ್ಲಿ ಕಾಣಬಹುದು)

 

ಕಾಲಃ ಸ್ವಭಾವೋ ನಿಯತಿರ್ಯ್ಯದೃಚ್ಛಾ ಭೂತಾನಿ ಯೋನಿಃ ಪುರುಷೇತಿ ಚಿನ್ತ್ಯಾ

ಸಂಯೋಗ ಏಷಾಂ ನ ತ್ವಾತ್ಮಭಾವಾತ್ ಆತ್ಮಾಪ್ಯನೀಶಃ ಸುಖದುಃಖಹೇತೋಃ ೦೧.೦೨

 

ಬಹಳ ರೋಚಕವಾಗಿ ಋಷಿಗಳು  ‘ಸೃಷ್ಟಿಗೆ ಕಾರಣ ಯಾವುದಿರಬಹುದು’ ಎಂದು ವಿಶ್ಲೇಷಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಈ ಜಗತ್ತಿಗೆ ಕಾರಣ ‘ಕಾಲವೇ?, ಸ್ವಭಾವವೇ?, ನಿಯತಿಯೇ? , ಯದೃಚ್ಛೆಯೇ?, ಭೂತಗಳೇ?, ಯೋನಿಯೇ?, ಪುರುಷನೇ? ಅಥವಾ ಈ ಎಲ್ಲವುದರ ಸಂಯೋಗವೇ? ಅಥವಾ ಜೀವಾತ್ಮನೇ? ಹೀಗೆ ಅವರು ತಮ್ಮ ಜಿಜ್ಞಾಸೆಯನ್ನು  ಆರಂಭಿಸುತ್ತಾರೆ.

ಕಾಲಾತ್ ಪ್ರಸೂತಿಂ ಭೂತಾನಾಂ ಮನ್ಯಂತೇ ಕಾಲ ಚಿಂತಕಾಃ’ ಎಂದು ವೇದದಲ್ಲಿ ಹೇಳುವಂತೆ ಇಲ್ಲಿ ಋಷಿಗಳು ತಮ್ಮ ವಿಶ್ಲೇಷಣೆಯನ್ನು ‘ಕಾಲದಿಂದ  ಆರಂಭಿಸುತ್ತಾರೆ. ಈ ಜಗತ್ತಿಗೆ ಕಾರಣ ಕಾಲವಿರಬಹುದೇ? ಏಕೆಂದರೆ ಪ್ರತಿಯೊಂದಕ್ಕೂ ಒಂದು ಕಾಲವಿದೆ. ಪ್ರತಿಯೊಂದು ಪದಾರ್ಥದ ಸೃಷ್ಟಿ ಮತ್ತು  ಸಂಹಾರದ ಹಿಂದೆ ಒಂದು ಕಾಲವಿದೆ. ಆಯಾ ಕಾಲಕ್ಕೆ ಅದು ಆಗುತ್ತಾ ಹೋಗುತ್ತದೆ. ನಮ್ಮ ಬದುಕಿನಲ್ಲೂ ಕೂಡಾ ಹುಟ್ಟು, ಬಾಲ್ಯ, ಯೌವನ, ಮುಪ್ಪು, ಸಾವು.  ಈ ಎಲ್ಲಾ ಘಟನೆಗಳ ಹಿಂದೆ ಒಂದು ಕಾಲದ ಮಾಪನವಿರುತ್ತದೆ. ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ, ಹೀಗೆ ಆಯಾ ಕಾಲದಲ್ಲಿ ಏನು ಆಗಬೇಕೋ ಅದು ಆಗುತ್ತಾ ಹೋಗುತ್ತದೆ.  ಪ್ರಾಚೀನರು ಸೃಷ್ಟಿ- ಸ್ಥಿತಿ-ಸಂಹಾರಕ್ಕೂ  ಕಾಲದ ಲೆಕ್ಕಾಚಾರವನ್ನು ಹೇಳಿರುವುದನ್ನು ನಾವು ಕಾಣಬಹುದು. ಭೂಮಿ ಸೃಷ್ಟಿಯಾದರೆ ಅದು ಹದಿನಾಲ್ಕು ಮನ್ವಂತರಗಳ ಕಾಲ ಇರುತ್ತದೆ. ಅಂದರೆ ನಡುವೆ ಸುಮಾರು ಇಪ್ಪತ್ತು ಸಾವಿರ ವರ್ಷಗಳ ಆವಾಂತರ ಪ್ರಳಯಗಳನ್ನೊಳಗೊಂಡ ೪೩೨ ಕೋಟಿ ವರ್ಷಗಳು ಭೂಮಿಯ ಆಯಸ್ಸು. ನಂತರ ೪೩೨ ಕೋಟಿ ವರ್ಷ ಪ್ರಳಯಕಾಲ. ಈ ಪ್ರಳಯಕಾಲದ ಕೊನೆಯ ಎಂಟನೇ ಒಂದು ಭಾಗ ಕಾಲದಲ್ಲಿ (ಅಂದರೆ ಕೊನೆಯ ೫೪ ಕೋಟಿ ವರ್ಷಗಳಲ್ಲಿ)  ಸೃಷ್ಟಿಪ್ರಕ್ರಿಯೆ ಮರಳಿ ಪ್ರಾರಂಭವಾಗಿ ಮತ್ತೆ ಎಲ್ಲವೂ ಮರಳಿ ವಿಕಸನವಾಗುತ್ತದೆ. ನಂತರ ಮತ್ತೆ ಮರಳಿ ೪೩೨ಕೋಟಿ ವರ್ಷ ಸ್ಥಿತಿಕಾಲ. ಹೀಗೆ ಕಾಲಚಕ್ರದಲ್ಲಿ ಎಲ್ಲವೂ ನಡೆಯತ್ತಾ ಮುಂದುವರಿಯುತ್ತದೆ.  ಈ ೮೬೪ ಕೋಟಿ ವರ್ಷಗಳ ಒಂದು ಚಕ್ರವನ್ನು ಚತುರ್ಮುಖನ ಒಂದು ದಿನ ಎಂದು ಪರಿಗಣಿಸುತ್ತಾರೆ.  ಆದ್ದರಿಂದ ಚತುರ್ಮುಖನ ನೂರು ವರ್ಷಗಳು ಎಂದರೆ ೩೧,೧೦೪ ಸಾವಿರ ಕೋಟಿ ವರ್ಷಗಳು(೮೬೪x೩೦x೧೨x೧೦೦). ಆನಂತರ ಮಹಾಪ್ರಳಯವಾಗಿ ಸಮಸ್ತ ಬ್ರಹ್ಮಾಂಡ ನಾಶವಾಗುತ್ತದೆ. ನಂತರ  ೩೧,೧೦೪ ಸಾವಿರ ಕೋಟಿ ವರ್ಷಗಳ ಮಹಾಪ್ರಳಯಕಾಲವಿರುತ್ತದೆ. ಹೀಗೇ ಕಾಲಚಕ್ರದೊಂದಿಗೆ ಸೃಷ್ಟಿ-ಸ್ಥಿತಿ-ಲಯ ಪ್ರಕ್ರಿಯೆ ಮುಂದುವರಿಯುತ್ತದೆ. ಇಷ್ಟೆಲ್ಲಾ ವ್ಯವಸ್ಥೆ ಇದೆ ಎಂದ ಮೇಲೆ, ಈ ಜಗತ್ತಿಗೆ ಕಾರಣ ಕಾಲವೇ ಇರಬಹುದಲ್ಲವೇ ಎಂದು ಚಿಂತನೆ ಮಾಡಿದ ಋಷಿಗಳು, ವಿಮರ್ಶೆಮಾಡಿದ ನಂತರ, ಜಗತ್ತಿನ ಕಾರಣಕ್ಕೆ ಕಾಲ ಕಾರಣವಲ್ಲ ಎನ್ನುವುದನ್ನು ತಿಳಿಯುತ್ತಾರೆ. ಏಕೆಂದರೆ  ಕಾಲದಲ್ಲಿ ಸೃಷ್ಟಿಯಾಗುವುದೇ ವಿನಃ ಕಾಲದಿಂದ ಸೃಷ್ಟಿಯಾಗುವುದಲ್ಲ. ಈ ಜಗತ್ತಿನ ಯೋನಿ ಅಥವಾ ಉತ್ಪತ್ತಿ ಸ್ಥಾನ ಯಾವುದು? ಅಂದರೆ ಮೊತ್ತ ಮೊದಲ ತಂದೆ-ತಾಯಿ ಯಾರು ಎನ್ನುವುದು ಇಲ್ಲಿ ಪ್ರಶ್ನೆ. ಯಾವುದೇ ಸೃಷ್ಟಿಯಾಗಲು ಅಲ್ಲಿ ಜ್ಞಾನ-ಇಚ್ಛೆ-ಕ್ರಿಯೆ ಅಗತ್ಯ. ಉದಾಹರಣೆಗೆ ಮಡಕೆಯನ್ನು ಒಬ್ಬ ಕುಂಬಾರ ಮಾಡಬೇಕಾದರೆ ಆ ಮಡಕೆಯನ್ನು ಯಾವ ಮಣ್ಣಿನಿಂದ ಮಾಡಬೇಕು, ಎಷ್ಟು ನೀರು ಹಾಕಬೇಕು, ಎಷ್ಟು ಹದ ಮಾಡಬೇಕು, ಹೇಗೆ ಆಕಾರ ಕೊಡಬೇಕು, ಇತ್ಯಾದಿ ಜ್ಞಾನ ಬೇಕು. ಕೇವಲ ಜ್ಞಾನ ಇದ್ದರೆ ಸಾಲದು, ಮಾಡಬೇಕು ಎನ್ನುವ ಇಚ್ಛೆ ಇರಬೇಕು ಮತ್ತು ಬಾಹ್ಯ ಪರಿಕರಗಳನ್ನು ಬಳಸಿ ಮಾಡಬೇಕು. ಹೀಗೆ ಯಾವುದೇ ಒಂದು ವಸ್ತು ನಿರ್ಮಾಣವಾಗಬೇಕಾದರೆ ಅಲ್ಲಿ ಇಚ್ಛಾಶಕ್ತಿ,  ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಮೂಲಭೂತ ಶಕ್ತಿಗಳಾಗಿರುತ್ತವೆ. ಆದರೆ ಕಾಲಕ್ಕೆ ಇದ್ಯಾವುದೂ ಇಲ್ಲ. ಪ್ರತಿಯೊಂದೂ ಕಾಲಬದ್ಧವಾಗಿದೆ ನಿಜ, ಆದರೆ ಕಾಲವೇ ಈ ಜಗತ್ತಿಗೆ ಕಾರಣವಲ್ಲ. 

ಸರಿ, ಸೃಷ್ಟಿಗೆ ಕಾಲ ಕಾರಣವಲ್ಲ. ಹಾಗಿದ್ದರೆ ‘ಸ್ವಭಾವ’ ಕಾರಣವಿರಬಹುದೋ ಎನ್ನುವ ಜಿಜ್ಞಾಸೆ. ಸ್ವಭಾವ ಎಂದರೆ ಪ್ರತಿಯೊಂದು ವಸ್ತುವಿನಲ್ಲಿರುವ ಅಸಾಧಾರಣವಾದ ಅದರ ವಿಶಿಷ್ಟಗುಣ (exclusive quality of a thing ). ಇದನ್ನು ಸಂಸ್ಕೃತದಲ್ಲಿ ತಾರ್ಕಿಕವಾಗಿ ತದ್ ವ್ಯಕ್ತಿತ್ವ (Haecceity)  ಎನ್ನುತ್ತಾರೆ. ಉದಾಹರಣೆಗೆ ಮಾವಿನ ಬೀಜದಿಂದ ಮಾವಿನ ಗಿಡವೇ ಬೆಳೆಯುತ್ತದೆ ಹೊರತು ಹಲಸಿನ ಗಿಡವಲ್ಲ.  ಅದು ಮಾವಿನ ಬೀಜದ ಸ್ವಭಾವ. ಹಾಗೇ, ಪ್ರತಿಯೊಂದು ವಸ್ತುವಿಗೂ(ವ್ಯಕ್ತಿಗೂ) ತನ್ನದೇ ಆದ ಒಂದು ವಿಶಿಷ್ಟ ಗುಣವಿದೆ. ಅದರ ವಿಕಸನವೇ ಸೃಷ್ಟಿ. ಯಾರಯಾರ ಸ್ವಭಾವ ಹೇಗೋ ಹಾಗೆಹಾಗೆ ಸೃಷ್ಟಿಯಾಗುತ್ತದೆ ಎನ್ನುವ ಜಿಜ್ಞಾಸೆ.

ಸ್ವಭಾವದಲ್ಲಿ ಮೂರು ವಿಧ. ಸತ್ವ-ರಜಸ್ಸು-ತಮಸ್ಸು. ಈ ಮೂರು ಗುಣದ ಮಿಶ್ರಣದಲ್ಲೇ ಜಗತ್ತಿನ ಪ್ರತಿಯೊಂದು ಕ್ರಿಯೆ ನಡೆಯುತ್ತದೆ. ಸತ್ವ ಹೆಚ್ಚಾದಾಗ ಜ್ಞಾನ ಸಂಪಾದನೆಯತ್ತ ಮನಸ್ಸು ಹೊರಳಿದರೆ, ರಜಸ್ಸು ಹೆಚ್ಚಾದಾಗ ಹಣ ಸಂಪಾದನೆ ಮನಸ್ಸಿಗೆ ಮುಖ್ಯವಾಗುತ್ತದೆ. ತಮಸ್ಸು ಹೆಚ್ಚಾದಾಗ ನಿದ್ರೆ, ಆಲಸ್ಯ, ಸೋಮಾರಿತನ ಹೆಚ್ಚಾಗುತ್ತದೆ.

ವ್ಯಕ್ತಿಯ ಮೂಲಸ್ವಭಾವವನ್ನು ಗುರುತಿಸುವುದು ಕಷ್ಟದ ಕೆಲಸ. ಹೆಚ್ಚಾಗಿ ಪರಿಸರದ ಪ್ರಭಾವವೇ ವ್ಯಕ್ತಿಯಲ್ಲಿ ಮೇಲ್ನೋಟಕ್ಕೆ ಕಾಣುತ್ತಿರುತ್ತದೆ. ಆದರೆ ಅದು ಅವನ ಸ್ವಭಾವವಲ್ಲ. ಯಾವ ಪರಿಸರದಲ್ಲೂ ಬದಲಾಗದ ನಮ್ಮದೇ ಆದ  ಮನೋವೃತ್ತಿ ಏನಿದೆ, ಅದೇ ನಮ್ಮ ಮೂಲಸ್ವಭಾವ. ಇಂತಹ ಸ್ವಭಾವದಿಂದ ಬೆಳವಣಿಗೆ ಇದೆ ನಿಜ, ಆದರೆ ಸ್ವಭಾವವೇ  ಈ ಜಗತ್ತಿಗೆ ಕಾರಣವಲ್ಲ. ಏಕೆಂದರೆ ಅಲ್ಲಿ ಚೈತನ್ಯದ ಪ್ರಕ್ರಿಯೆಯೇ ಇಲ್ಲ. ಇದೂ ಕೂಡಾ ಕಾಲದಂತೇ.          

  ಹಾಗಿದ್ದರೆ  ಈ ಜಗತ್ತಿಗೆ ಕಾರಣ ನಿಯತಿಯೋ ಎನ್ನುವ ಪ್ರಶ್ನೆ. ನಿಯತಿ ಎಂದರೆ ಕರ್ಮದ ಬದ್ಧತೆ. ನಮ್ಮನಮ್ಮ ಸ್ವಭಾವಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ. ಹಾಗಾಗಿ ಸ್ವಭಾವದೊಂದಿಗೆ ಕರ್ಮವೂ ಸೇರಿ ವಿಕಸನವಾಗುತ್ತಾ ಹೋಗುತ್ತದೆ. ‘ ದ್ರವ್ಯಂ ಕರ್ಮಚ ಕಾಲಶ್ಚ ಸ್ವಭಾವೋ  ಜೀವ ಏವ ಚ ‘ ಎನ್ನುವುದು ವೇದದ ಮಾತು. ಮನುಷ್ಯ ತನ್ನ ಸ್ವಭಾವಕ್ಕೆ ತಕ್ಕಂತೆಯೇ ಕರ್ಮ ಮಾಡುತ್ತಾ ಮುಂದುವರಿಯುತ್ತಾನೆ. ಹಾಗಾಗಿ ನಮ್ಮ ಕರ್ಮ ಕೇವಲ ನಮ್ಮ ವಿವೇಚನೆಯಿಂದ ಆಗುವುದಲ್ಲ, ನಮ್ಮ ಸ್ವಭಾವದಂತೆ ಕರ್ಮ ನಡೆಯುತ್ತದೆ ಮತ್ತು ಕರ್ಮಚಕ್ರ ಹಾಗೇ ಮುಂದುವರಿಯುತ್ತದೆ. ಹಾಗಾಗಿ ನಾವು ಕರ್ಮಾಧೀನರಾಗಿ ಬದುಕುತ್ತಿದ್ದೇವೆ. ನಮ್ಮನ್ನು ಕರ್ಮ ನಿಯಂತ್ರಿಸುತ್ತಿದೆ.  ಅದರ ನಿಯತಿಗೆ ಒಳಪಟ್ಟು ನಾವಿದ್ದೇವೆ. ಈ  ಕರ್ಮದ ಬದ್ಧತೆ ಈ ಜಗತ್ತಿಗೆ ಕಾರಣವೋ ಎನ್ನುವ ಜಿಜ್ಞಾಸೆ. ಆದರೆ ಇದು ಸಾಧ್ಯವಿಲ್ಲ. ಯಾವುದೋ ಜನ್ಮದಲ್ಲಿ ಮಾಡಿದ ಕರ್ಮ ಈ ಜನ್ಮದಲ್ಲಿ  ಫಲಕೊಡುವುದನ್ನು ನಾವು ಕಾಣುತ್ತೇವೆ. (ಪುನರ್ಜನ್ಮ ಮತ್ತು ಕರ್ಮಫಲ ಕುರಿತು Edgar Cayce ಕುರಿತಾದ  ಪುಸ್ತಕಗಳಲ್ಲಿ ಆಧುನಿಕ ಸಂಶೋಧನೆಯ ವಿವರಗಳನ್ನು ಕಾಣಬಹುದು) ಈ ಲೆಕ್ಕಾಚಾರವನ್ನು ಇಡುವ ಚೇತನಶಕ್ತಿ ಯಾವುದು? ಹೀಗಾಗಿ ಜಡವಾದ ಕರ್ಮ ಈ ಪ್ರಪಂಚಕ್ಕೆ ಕಾರಣವಲ್ಲ.

    ಹಾಗಿದ್ದರೆ ಈ ಸೃಷ್ಟಿ-ಸ್ಥಿತಿ-ಸಂಹಾರ ಎಲ್ಲವೂ ಆಕಸ್ಮಿಕವೋ ? ಖಂಡಿತಾ ಅಲ್ಲ. ಏಕೆಂದರೆ ಈ ಪ್ರಪಂಚ ಗಣಿತಬದ್ಧವಾಗಿದೆ. ಸೂರ್ಯ, ಚಂದ್ರ, ಭೂಮಿ, ಗ್ರಹ ಗೋಲಗಳು, ಅವುಗಳ ಸುತ್ತುವಿಕೆ, ಅವುಗಳ ನಡುವಿನ ಅಂತರ,  ಎಲ್ಲವೂ ವ್ಯವಸ್ಥಿತವಾಗಿದೆ. ಇಲ್ಲಿ ಯಾವುದೂ ಆಕಸ್ಮಿಕವಲ್ಲ. ಕಾರಣವಿಲ್ಲದೆ ಕಾರ್ಯ ನಡೆಯುವುದಿಲ್ಲ. ಕಾರಣ ನಮಗೆ ತಿಳಿಯದಿದ್ದಾಗ ನಾವು ಅದನ್ನು ಆಕಸ್ಮಿಕ ಎಂದು ಕರೆಯಬಹುದು ಅಷ್ಟೇ. ಈ ಕಾರಣದ ಅನ್ವೇಷಣೆಯಲ್ಲೇ ಶಕುನಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಇತ್ಯಾದಿಗಳು ಹುಟ್ಟಿಕೊಂಡಿರುವುದು. ಹೀಗಾಗಿ ಈ ಪ್ರಪಂಚ ಒಂದು ಆಕಸ್ಮಿಕವಲ್ಲ.

   ‘ಭೂತಾನಿಯೋನಿಃ’ : ಈ ಇಡೀ ಸ್ಥೂಲಪ್ರಪಂಚ ಮಣ್ಣು, ನೀರು, ಬೆಂಕಿ, ಗಾಳಿ ಮತ್ತು  ಆಕಾಶ ಇದರ ವಿಕಾರ. ಆದ್ದರಿಂದ ಈ ಪ್ರಪಂಚದಲ್ಲಿರುವ ಸಮಸ್ತ ಜಡಪದಾರ್ಥಗಳ ಮೂಲದ್ರವ್ಯ ಪಂಚಭೂತಗಳು. ಗೊಬ್ಬರದಲ್ಲಿರುವುದೂ ಮಣ್ಣು-ನೀರು-ಬೆಂಕಿ ಹಾಗು ಅದರಿಂದ ಅರಳಿ ನಿಲ್ಲುವ ಸುಂದರವಾದ ಗುಲಾಬಿ ಹೂ ಕೂಡ ಮಣ್ಣು-ನೀರು-ಬೆಂಕಿಯಿಂದಾಗಿದೆ. ಇಲ್ಲಿ ಬೆಂಕಿ ಎಂದರೆ ಶಾಖ. ಸೂರ್ಯನ ಬೆಳಕಿನಿಂದ ನಮಗೆ ಬೇಕಾದ ಶಾಖ ದೊರೆಯುತ್ತದೆ. ಹೀಗಾಗಿ  ಗೊಬ್ಬರವೇ ಇರಲಿ ಅಥವಾ ಗುಲಾಬಿ ಹೂವೇ ಇರಲಿ. ಅದು ಆಗಿರುವುದು ಮಣ್ಣು-ನೀರು ಮತ್ತು ಬೆಂಕಿಯ ಸಂಯೋಜನೆಯಿಂದ. ಆದರೆ ಪ್ರಮಾಣ ಬೇರೆಬೇರೆ ಇರುತ್ತದೆ ಅಷ್ಟೇ. ಜೊತೆಗೆ ಗಾಳಿ ಆಕಾಶ ಇದ್ದೇ ಇರುತ್ತದೆ. ಉದಾಹರಣೆಗೆ ಭತ್ತದ ಬೀಜ. ಅದನ್ನು ಮಣ್ಣಿನಲ್ಲಿ ಹಾಕಿದೆವು, ನೀರನ್ನು ಹಾಕಿದೆವು. ಆಕಾಶದಿಂದ ಬಿಸಿಲು ಬಿತ್ತು,  ಆಗ ಆ ಬೀಜ ಚಿಗುರಿತು, ಬೆಳೆದು ತೆನೆ ಬಿಟ್ಟಿತು. ಆ ತೆನೆಯನ್ನು ತೆಗೆದು ಅಕ್ಕಿ ಮಾಡಿದೆವು. ಅಕ್ಕಿಯನ್ನು ನೀರಿನಲ್ಲಿ ಹಾಕಿ ಬೆಂಕಿಯಿಂದ ಅನ್ನ ಮಾಡಿದೆವು. ಹೀಗೇ ಪ್ರಪಂಚದ ಅನಂತ ವಸ್ತುಗಳೂ ಕೂಡಾ ಈ ಪಂಚಭೌತಿಕ ವಸ್ತುಗಳ ಸಮ್ಮಿಶ್ರಣವೇ ಆಗಿದೆ. ಆದರೆ ಪಂಚಭೂತಗಳೇ ಈ ಪ್ರಪಂಚಕ್ಕೆ ಕಾರಣವಲ್ಲ. ಏಕೆಂದರೆ ಬುದ್ಧಿಪೂರ್ವಕವಾಗಿ ಇವುಗಳನ್ನು ಒಗ್ಗೂಡಿಸುವ ಶಕ್ತಿ ಇಲ್ಲದೇ, ಕೇವಲ ಪಂಚಭೂತಗಳಿಂದ ಯಾವುದೂ ಸಾಧ್ಯವಾಗುವುದಿಲ್ಲ. ತನ್ನಷ್ಟಕ್ಕೇ ಮಣ್ಣಿನಿಂದ ಮಡಕೆಯಾಗುವುದಿಲ್ಲ. ಅದನ್ನು ಬುದ್ಧಿಪೂರ್ವಕವಾಗಿ ಮಾಡುವ ಚೈತನ್ಯ ಅಲ್ಲಿರಬೇಕು. ಹಾಗಾಗಿ ಪಂಚಭೂತಗಳು ಕರ್ತೃ ಅಲ್ಲ, ಅದು ಉಪಾದಾನ ಕಾರಣ ಅಷ್ಟೇ.

ಹಾಗಿದ್ದರೆ  ಈ ಪ್ರಪಂಚ ಸೃಷ್ಟಿಗೆ ಕಾರಣ ಯೋನಿಃ ? ಇದು ಮುಂದಿನ ಪ್ರಶ್ನೆ. ಈ ಜಗತ್ತಿಗೆ ಎಲ್ಲಕ್ಕೂ ಮೂಲಪ್ರಕೃತಿ ಎನ್ನುವುದಿದೆ. ಈ ತ್ರಿಗುಣಾತ್ಮಕವಾದ ಪ್ರಕೃತಿಯಿಂದಲೇ ಎಲ್ಲಾ ಪ್ರಾಕೃತ ಪ್ರಪಂಚವಾಗಿದೆ. ಅದನ್ನು ಇಲ್ಲಿ ಯೋನಿಃ(ಮೂಲಕಾರಣ) ಎಂದಿದ್ದಾರೆ. ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಸರ್ವ ವಸ್ತುಗಳು ತ್ರಿಗುಣಾತ್ಮಕವಾಗಿವೆ. ಸದಾ ಕೆಳಮುಖವಾಗಿ ಚಲಿಸುವ ಮಣ್ಣು ತಮೋಗುಣವನ್ನು, ತಗ್ಗಿದ್ದ ಕಡೆ ಹರಿಯುವ ನೀರು ರಜೋಗುಣವನ್ನು ಹಾಗು ಸದಾ ಮೇಲ್ಮುಖವಾಗಿ ಉರಿಯುವ ಬೆಂಕಿ ಸತ್ವಗುಣವನ್ನು ಪ್ರತಿಬಿಂಬಿಸುತ್ತದೆ. ಮಣ್ಣು-ನೀರು-ಬೆಂಕಿಯ ಹಿಂದಿರುವ ಈ ತ್ರಿಗುಣವೇ ಇಡೀ ವಿಶ್ವದ ಮೂಲದ್ರವ್ಯ. ಹೀಗೆ  ಎಲ್ಲಿ ಸೃಷ್ಟಿ ಸ್ಥಿತಿ ಸಂಹಾರಗಳಿವೆಯೋ ಅಲ್ಲಿ ತ್ರೈಗುಣ್ಯವಿದೆ. ಹಾಗಾಗಿ  ತ್ರಿಗುಣಾತ್ಮಕವಾದ ಪ್ರಕೃತಿ ಈ ಪ್ರಪಂಚಕ್ಕೆ ಕಾರಣವಿರಬಹುದೇ ಎಂದರೆ ಹಿಂದೆ ಹೇಳಿದಂತೆ ಚೇತನ ಶಕ್ತಿ ಇಲ್ಲದೇ ಕೇವಲ ಜಡದಿಂದ ಇದು ಸಾಧ್ಯವಿಲ್ಲ.

   ಸ್ತ್ರೀಶಕ್ತಿ ಎನ್ನುವ ಅರ್ಥದಲ್ಲೂ ‘ಯೋನಿಃ’ ಪದ ಬಳಸುತ್ತಾರೆ. ಹುಟ್ಟುವುದು ತಾಯಿಯಿಂದ. ಆದ್ದರಿಂದ ಸೃಷ್ಟಿಗೆ ತಾಯಿ ಜೊತೆಗೆ ‘ಪುರುಷಃ’ ಕಾರಣವಿರಬಹುದೇ ಎನ್ನುವ ಜಿಜ್ಞಾಸೆ. ಇದು ಬುದ್ಧಿಶಕ್ತಿಯುಳ್ಳ ಚೇತನಾಶಕ್ತಿಯೇನೋ ನಿಜ. ಆದರೆ ಪ್ರಪಂಚಕ್ಕೆ ಮೂಲ ಕಾರಣರು ಇವರಾಗಲು ಸಾಧ್ಯವಿಲ್ಲ. ಏಕೆಂದರೆ ಮಕ್ಕಳು ಬೇಕು ಎನ್ನುವ ಎಷ್ಟೋ ತಂದೆ-ತಾಯಿಗಳಿಗೆ ಮಕ್ಕಳೇ ಆಗುವುದಿಲ್ಲ. ತಾಯಿಯ ಹೊಟ್ಟೆಯಲ್ಲಿ ಮುದ್ದಾದ ಮಗುವೊಂದು ರೂಪುಗೊಳ್ಳುತ್ತದೆ. ಆ ಮಗುವನ್ನು ಗರ್ಭದಲ್ಲಿ ನಿಂತು ರೂಪಿಸುತ್ತಿರುವ ಶಿಲ್ಪಿ ಯಾರು? ಈ ಚೇತನಗಳಿಗೆ ಎಲ್ಲವನ್ನೂ ಮಾಡುವ ಆಸೆ ಇರಬಹುದು, ಆದರೆ ಸ್ವಯಂ ಅಸ್ವತಂತ್ರನಾದ ಮಾನವ ಇದೆಲ್ಲವನ್ನು ಮಾಡಲು ಸಾಧ್ಯವಿಲ್ಲ.

   ಚತುರ್ಮುಖನನ್ನೂ ‘ಪುರುಷಃ’ ಎನ್ನುತ್ತಾರೆ. ಆ ಚತುರ್ಮುಖನನ್ನು ‘ಅಬ್ಜ-ಸಂಭವಃ’ ಎನ್ನುತ್ತಾರೆ. ಅಂದರೆ ಅವನು ಹುಟ್ಟಿರುವುದು ಇನ್ನೊಬ್ಬ ತಂದೆಗೆ. ಆದ್ದರಿಂದ ಎಂದೂ ಹುಟ್ಟದ, ಹುಟ್ಟಿಸುವ ಶಕ್ತಿ ಚತುರ್ಮುಖನೂ ಅಲ್ಲ.    

‘ಈ ಎಲ್ಲಾ ಕಾರಣದಿಂದ ಜಗತ್ತಿಗೆ ಕಾರಣ ಏನು ಎನ್ನುವುದನ್ನು ನಾವು ಯೋಚನೆ ಮಾಡಬೇಕು’ ಎಂದುಕೊಳ್ಳುತ್ತಾರೆ ಋಷಿಗಳು. ಏಕೆಂದರೆ ಈಗಾಗಲೇ  ವಿಶ್ಲೇಷಿಸಿರುವ ಕಾಲ, ಸ್ವಭಾವ, ಪ್ರಕೃತಿ, ನಿಯಮ, ಆಕಸ್ಮಿಕ, ಪಂಚಭೂತ, ಮನುಷ್ಯ ಇದ್ಯಾವುದೂ ಸ್ವತಂತ್ರವಾದ ಕಾರಣ ಅಲ್ಲ. ಆದರೆ ಇವುಗಳೆಲ್ಲವೂ ಸೃಷ್ಟಿಗೆ ಬೇಕಾದ ಪರಿಕರಗಳು. ಹಾಗಿದ್ದರೆ ಇವುಗಳ ಸಂಯೋಗದಿಂದ ಪ್ರಪಂಚ ಸೃಷ್ಟಿ ಆಯಿತು ಎಂದರೆ, ಅದನ್ನು ಗಣಿತಬದ್ಧವಾಗಿ ಮಾಡುವ ಶಕ್ತಿಯೊಂದು ಬೇಕಲ್ಲವೇ? ಹಾಗಿದ್ದರೆ ಇವುಗಳ ಜೊತೆಗೆ ಆತ್ಮ (ಜೀವ) ಸೇರಿ ಪ್ರಪಂಚ ಸೃಷ್ಟಿ ಆಯಿತು ಎಂದರೆ, ಅದೂ ನಿಜವಲ್ಲ. ಏಕೆಂದರೆ ಆತ್ಮ ತಾನೇ ಸಮರ್ಥನಾಗಿದ್ದರೆ ದುಃಖವನ್ನು ಏಕೆ ಅನುಭವಿಸುತ್ತಿದ್ದ? ಹೀಗಾಗಿ ಸುಖ-ದುಃಖ ಅನುಭವಿಸುವ ಆತ್ಮ ಈ ಜಗತ್ತಿಗೆ ಕಾರಣವಲ್ಲ. ಹೀಗಾಗಿ ಒಟ್ಟಿನಲ್ಲಿ  ಸ್ವತಂತ್ರ ಶಕ್ತಿಗಳಲ್ಲದ ಮೇಲೆ ಹೇಳಿದ ಯಾವುದೂ ಈ ಜಗತ್ತಿಗೆ ಮೂಲಕಾರಣ ಅಲ್ಲ.

ಈ ರೀತಿ ಚಿಂತನೆ ಮಾಡಿದ ಋಷಿಗಳು, ಇದು ಮನುಷ್ಯನ ಬುದ್ಧಿಶಕ್ತಿಗೆ ತಿಳಿಯುವ ವಿಷಯವಲ್ಲ, ಈ ಸತ್ಯ ಸ್ಫುರಣವಾಗಬೇಕೇ ಹೊರತು ನಮ್ಮ ಜಿಜ್ಞಾಸೆಯಿಂದ ತಿಳಿಯಲು ಸಾಧ್ಯವಿಲ್ಲ ಎಂದರಿತು, ಧ್ಯಾನದಮೂಲಕ ತಮ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಿರ್ಧರಿಸುತ್ತಾರೆ.    

 

ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುಣೈರ್ನ್ನಿಗೂಢಾಮ್

ಯಃ ಕಾರಣಾನಿ ನಿಖಿಲಾನಿ ತಾನಿ  ಕಾಲಾತ್ಮಯುಕ್ತಾನ್ಯಧಿತಿಷ್ಠತ್ಯೇಕಃ ೧.೩

 

ಧ್ಯಾನ ಎನ್ನುವುದು ನಮ್ಮ ಆಂತರಿಕ ಪ್ರಯೋಗಾಲಯ. ಬಾಹ್ಯಮತಿಗೆ(intellectual mind) ತಿಳಿಯದ ವಿಷಯವನ್ನು ಅಂತರ್ಬೋಧೆಯಿಂದ(intuitive mind) ತಿಳಿಯುವ ಉಪಾಯವೇ ಈ ಧ್ಯಾನ. ಇಂದು ನಮಗೆ ಏನಾದರೂ ಜಿಜ್ಞಾಸೆ ಬಂದರೆ ಅದನ್ನು ಪ್ರಯೋಗಾಲಯಗಳಲ್ಲಿ ತಿಳಿಯಲು ಪ್ರಯತ್ನಿಸುತ್ತೇವೆ. ಹೊರಗಿನ ಪ್ರಯೋಗಾಲಯದಲ್ಲಿ ತಿಳಿಯಲು ಅಸಾಧ್ಯವಾದ ಅನೇಕ ವಿಷಯಗಳನ್ನು ಒಳಗಿನ ಪ್ರಯೋಗಾಲಯದಲ್ಲಿ ತಿಳಿಯಲು ಸಾಧ್ಯ. ಆದರೆ ಇಂದು ಹೆಚ್ಚಿನವರಿಗೆ ಆ ಒಳಗಿನ ಪ್ರಯೋಗಾಲಯದ ಪರಿಚಯವೇ ಇಲ್ಲ.  ಕಾರಣ ನಮ್ಮ ಬಾಹ್ಯಮುಖೀ ಬದುಕು. ಈ ಒಳಗಿನ ಪ್ರಯೋಗಾಲಯದಲ್ಲಿ ಸಾಧನೆ ಮಾಡುವುದಕ್ಕೆ ನಮ್ಮ ಪ್ರಾಚೀನರು ಕೊಟ್ಟ ಹೆಸರೇ ಧ್ಯಾನ. ಇಲ್ಲಿ ಋಷಿಗಳು ಧ್ಯಾನ ಎನ್ನುವ ಯೋಗವನ್ನು(ಉಪಾಯವನ್ನು) ಬಳಸಿದರಂತೆ. ಅಂದರೆ ಹೊರಪ್ರಜ್ಞೆಯನ್ನು ಸ್ಥಗಿತಗೊಳಿಸಿ, ಅಂತರಂಗ ಪ್ರಜ್ಞೆಯನ್ನು ಜಾಗೃತಗೊಳಿಸಿದರು.

ಇಂದು ನಮಗೆ ಎಚ್ಚರ-ಕನಸು-ನಿದ್ದೆ ಈ ಮೂರು ಸ್ಥಿತಿ ಮಾತ್ರ ತಿಳಿದಿದೆ. ಆದರೆ ಅದರಿಂದ ಆಚೆಗಿನ ಸ್ಥಿತಿ ತಿಳಿದಿಲ್ಲ. ಈ ಮೂರು ಯಾವುದೇ ಪ್ರಯತ್ನವಿಲ್ಲದೆ ತಿಳಿಯುವ ವಿಷಯ. ಇಲ್ಲಿ ಎಚ್ಚರವಿದ್ದಾಗ ಕನಸು-ನಿದ್ದೆ ಇಲ್ಲ. ಕನಸಿನಲ್ಲಿದ್ದಾಗ ಎಚ್ಚರ-ನಿದ್ದೆ ಇಲ್ಲ. ನಿದ್ದೆಯಲ್ಲಿದ್ದಾಗ ಎಚ್ಚರ-ಕನಸು ಇಲ್ಲ. ಆದರೆ ಈ ಮೂರೂ ಸ್ಥಿತಿಗಳು ಏಕಕಾಲದಲ್ಲಿ ಜಾಗೃತವಾಗಿರುವ ನಾಲ್ಕನೇ ಸ್ಥಿತಿಯೊಂದಿದೆ. ಅದನ್ನು ನಾವು   ಧ್ಯಾನದ ಮುಖೇನ ಹೊಂದಬಹುದು. ಅಂದರೆ ಹೊರಪ್ರಪಂಚದ ಬಗ್ಗೆ ನಿದ್ದೆ, ಕನಸಿನಂತೆ ಒಳಪ್ರಪಂಚವನ್ನು ಕಾಣುವುದು, ಆದರೆ ಎಚ್ಚರದಂತೆ ತಮಗೆ ಏನು ಬೇಕೋ ಅದನ್ನು ಕಾಣುವ ಸ್ಥಿತಿಯೇ ಈ ಧ್ಯಾನಸ್ಥಿತಿ. ಇದು ಈ ಮೂರೂ ಅವಸ್ಥೆಗಳ ಸಮ್ಮಿಲನ.

ನಮ್ಮ ಮನಸ್ಸು ವಿಕ್ಷಿಪ್ತ. ಅದು ಒಂದು ಕ್ಷಣ ಒಂದೇ ಕಡೆ ನಿಂತಿರುವುದಿಲ್ಲ. ಹಾಗಾಗಿ ನಮಗೆ ಏಕಾಗ್ರತೆ ಬರುವುದಿಲ್ಲ. ಆದರೆ ಈ ಮನಸ್ಸು ಒಂದು ವಿಷಯವನ್ನು ಏಕಾಗ್ರತೆಯಿಂದ ಅತ್ಯಂತ ಆಳವಾಗಿ ಚಿಂತಿಸಲಾರಂಭಿಸಿದರೆ ಆಗ ಅದು ಒಂದೆಡೆ ಸ್ಥಿರಗೊಳ್ಳುತ್ತದೆ.  ಇಲ್ಲಿ ಋಷಿಗಳಿಗೆ ಜಗತ್ತಿನ ಮೂಲ ಯಾವುದು ಎಂದು ತಿಳಿಯುವ ಚಡಪಡಿಕೆ. ಹಾಗಾಗಿ ಆ ಚಡಪಡಿಕೆಯ ವಿಷಯದಲ್ಲಿ ತಮ್ಮ ಮನಸ್ಸನ್ನು ಕೇಂದ್ರೀಕರಿಸಿ, ತಮ್ಮ ಒಳಗಿನ ಅದ್ಭುತ ಪ್ರಪಂಚವನ್ನು ಅವರು ಪ್ರವೇಶಿಸಿದ್ದಾರೆ. ಈ ರೀತಿ ಧ್ಯಾನ ಮಾಡುತ್ತಾ ಅವರು ತಮ್ಮ ಪ್ರಶ್ನೆಗೆ ಉತ್ತರ ಕಂಡುಕೊಂಡರು. “ನಮ್ಮ ಕಣ್ಣಿಗೆ ಕಾಣದ ಒಂದು ದೇವಾತ್ಮ ಶಕ್ತಿ ಇಡೀ ವಿಶ್ವದಲ್ಲಿ ತುಂಬಿದೆ” ಎನ್ನುವ ಸತ್ಯವನ್ನು ಅವರು ಕಂಡರು. ಈ ಶಕ್ತಿಯನ್ನೇ ನಾವು ದೇವರು ಎನ್ನುವುದು. ಇಡೀ ಜಗತ್ತಿನ ವ್ಯಾಪಾರ ಯಾರಿಗೆ ಒಂದು ಸಣ್ಣ ಲೀಲೆಯೋ(ಕ್ರೀಡೆಯೋ) ಅವನು ದೇವ. ಅದೇ ಸಹಜವಾದ ಅನಂತ ಶಕ್ತಿ.   ಎಲ್ಲರ ಒಳಗೂ-ಹೊರಗೂ ವ್ಯಾಪಿಸಿರುವ ಶಕ್ತಿ ಇದಾಗಿದೆ.

ಏಕೆ ಈ ಶಕ್ತಿ ನಮ್ಮ ಕಣ್ಣಿಗೆ ಕಾಣುತ್ತಿಲ್ಲ ಎಂದರೆ ಇಲ್ಲಿ ಹೇಳುತ್ತಾರೆ: ‘ಆ ಶಕ್ತಿ ಬಹಿರ್ಮುಖವಾದ  ನಮ್ಮ ಮನಸ್ಸಿಗೆ ನಿಲುಕುವ ವಿಷಯವಲ್ಲ’ ಎಂದು. ನಮ್ಮ ಮನಸ್ಸು ತ್ರಿಗುಣಾತ್ಮಕವಾದುದು. ಆದರೆ ಆ ಶಕ್ತಿ ಗುಣಾತೀತ. ಹೀಗಾಗಿ ನಮ್ಮ ಮುಂದಿರುವ ಸತ್ವ-ರಜಸ್ಸು-ತಮಸ್ಸು ಎಂಬ ದಪ್ಪ ಪರದೆಯ ಆಚೆಗಿನ ಸತ್ಯವನ್ನು ನಮ್ಮ ಮನಸ್ಸು ನೇರವಾಗಿ ಗ್ರಹಿಸಲಾರದು. ಧ್ಯಾನ ಎಂದರೆ ಈ ಪರದೆಯನ್ನು ಕಿತ್ತು, ಮನಸ್ಸಿನ ಮೇಲಿನ ತ್ರಿಗುಣಗಳ ಪ್ರಭಾವವನ್ನು ಮೀರಿನಿಂತು ಆಚೆಗಿದನ್ನು ಕಾಣುವ ಸ್ಥಿತಿ. ಆ ರೀತಿ ಕಂಡಾಗ  ಋಷಿಗಳಿಗೆ ‘ಎಲ್ಲಾ ಕಡೆ ತುಂಬಿರುವ, ಎಲ್ಲದರೊಳಗೂ ತುಂಬಿರುವ ಒಂದು ಅನಂತವಾದ ಶಕ್ತಿ’ ಇರುವುದು ಕಾಣಿಸಿತು.  ಇದು ಹಿಂದೆ ಹೇಳಿದ  ಕಾಲ, ಸ್ವಭಾವ, ಪಂಚಭೂತ, ಜೀವಾತ್ಮ, ಇತ್ಯಾದಿ ಎಲ್ಲವುದಕ್ಕೂ ಕೂಡಾ ಶಕ್ತಿ ಕೊಡುವ ವಿಶ್ವಶಕ್ತಿ.  ಯಾವರೀತಿ  ಕುಂಬಾರನಿಲ್ಲದೆ  ಕೇವಲ ಮಣ್ಣು, ಕೋಲು, ಚಕ್ರ, ಇತ್ಯಾದಿಗಳು ಸೇರಿ ಮಡಿಕೆಯಾಗುವುದಿಲ್ಲವೋ, ಹಾಗೇ ಭಗವಂತನಿಲ್ಲದೆ ಇತರ ಯಾವುದೂ ಸ್ವಯಂ ಏನನ್ನೂ ಮಾಡಲಾರವು. ಆ ಭಗವಂತ ಎಲ್ಲದರೊಳಗಿದ್ದು ಎಲ್ಲವನ್ನೂ ಮಾಡಿಸುತ್ತಾನೆ. ನಾವು ಕೇವಲ ಒಂದು ಉಪಕರಣ ಅಷ್ಟೇ.

ಭಗವಂತ ಇದೆಲ್ಲವನ್ನೂ ಏಕೆ ಮಾಡಿಸುತ್ತಾನೆ ಎಂದರೆ- ‘ಧಿತಿಷ್ಠತಿ’ ಎಂದಿದ್ದಾರೆ. ಭಗವಂತ ಎಲ್ಲವನ್ನು ಮಾಡಿಸುವುದು ನಮಗಾಗಿ. ಭಗವಂತನ ಈ ಎಲ್ಲಾ ವ್ಯವಸ್ಥೆ ನಮ್ಮ ಆತ್ಮದ ವಿಕಸನಕ್ಕಾಗಿ. ಒಂದು ವೇಳೆ ಅವನು ನಮ್ಮನ್ನು ಸೃಷ್ಟಿ ಮಾಡದೇ ಇದ್ದಿದ್ದರೆ ನಾವು ಜಡದಂತೆ  ಇರಬೇಕಾಗಿತ್ತು.  ಜೀವ ತನ್ನ ವ್ಯಕ್ತಿತ್ವದ ವಿಕಸನ ಕಂಡುಕೊಳ್ಳಲು ಭಗವಂತ ಸೃಷ್ಟಿಮಾಡುತ್ತಾನೆ.

ಇಲ್ಲಿ ಎಲ್ಲವನ್ನೂ ಅವನೇ ಮಾಡುವುದಾದರೆ ಪಾಪ-ಪುಣ್ಯದ ಲೆಕ್ಕಾಚಾರ ನಮಗೇಕೆ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಇದಕ್ಕೆ ಉತ್ತರ ತುಂಬಾ ಸರಳ. ನಮ್ಮ ಮನೆಯಲ್ಲಿ ಪುರೋಹಿತರು ಬಂದು ಪೂಜೆ ಮಾಡಿದರೆ ಆ ಪೂಜೆಯ ಫಲ ಪೂಜೆ ಮಾಡಿದ ಪುರೋಹಿತರಿಗೆ ಹೋಗುವುದಿಲ್ಲ. ಬದಲಿಗೆ ಅವರು ಯಾರಿಗಾಗಿ ಆ ಪೂಜೆಯನ್ನು ಮಾಡಿದರೋ ಅವರಿಗೆ ಆ ಫಲ. ಅದೇ ರೀತಿ ಭಗವಂತ ಎಲ್ಲವನ್ನೂ ಮಾಡಿದರೂ ಕೂಡಾ, ಅದು ಜೀವಸ್ವಭಾವಕ್ಕೆ ಅನುಗುಣವಾಗಿ ನಡೆದು ಅದರ ಪಾಪ-ಪುಣ್ಯದ ಫಲ ಆ ಜೀವಕ್ಕೆ ಲಭಿಸಿ, ಅದಕ್ಕನುಗುಣವಾಗಿ ಆ ಜೀವದ ವಿಕಸನವಾಗುತ್ತದೆ.

ಸರಿ, ಮೂಲಶಕ್ತಿಯಿಂದಲೇ ಎಲ್ಲವೂ ನಡೆಯುತ್ತದೆ ನಿಜ. ಆದರೆ ನಮ್ಮಲ್ಲಿ ಅನೇಕ ದೇವತೆಗಳಿದ್ದಾರೆ.  ಸಂಹಾರ ಮಾಡುವ ಕಾಲ ನಾಮಕ ಶಿವ, ಸೃಷ್ಟಿ ಮಾಡುವ ಜೀವಕಲಾಭಿಮಾನಿ ಚತುರ್ಮುಖ, ಹೀಗೆ ಅನೇಕ ದೇವತೆಗಳಿದ್ದಾರಲ್ಲಾ ಎಂದರೆ, ಈ ಎಲ್ಲಾ ದೇವತೆಗಳೊಳಗೆ  ನಿಂತು ಮಾಡಿಸುವ ವಿಶ್ವಶಕ್ತಿ(ಸಾಟಿಯಿಲ್ಲದ/ಅದ್ವಿತೀಯ ಶಕ್ತಿ)  ಒಂದೇ ಎನ್ನುತ್ತಾರೆ ಋಷಿಗಳು. ಅದನ್ನೇ ನಾವು ಪರಬ್ರಹ್ಮ, ಪರಮಾತ್ಮ, ಇತ್ಯಾದಿಯಾಗಿ ಕರೆಯುತ್ತೇವೆ. ಅದೇ ಸಮಸ್ತ ದೇವತೆಗಳನ್ನು ನಿಯಂತ್ರಿಸುವ ಮಹಾಶಕ್ತಿ.  

 

ಸರ್ವಾಜೀವೇ ಸರ್ವಸಮ್ಸ್ಥೇ  ಬೃಹನ್ತೇ ಅಸ್ಮಿನ್ ಹಮ್ಸೋ ಭ್ರಾಮ್ಯತೇ ಬ್ರಹ್ಮಚಕ್ರೇ

ಪೃಥಗಾತ್ಮಾನಂ ಪ್ರೇರಿತಾರಂ ಚ ಮತ್ವಾ  ಜುಷ್ಟಸ್ತತಸ್ತೇನಾಮೃತತ್ವಮೇತಿ ೦೧-೦೬

 

ಧ್ಯಾನಸ್ಥಿತಿಯಲ್ಲಿ ತಾವು ಕಂಡುಕೊಂಡ ಭಗವಂತನನ್ನು ವರ್ಣಿಸುತ್ತಿರುವ ಋಷಿಗಳು ಮುಂದುವರಿದು ಹೇಳುತ್ತಾರೆ: ‘ಎಲ್ಲರಿಗೂ ಬದುಕು ಕೊಡುವವನು(ಸರ್ವಾಜೀವೇ), ಎಲ್ಲವುದಕ್ಕೂ ಕೊನೆಯ ನೆಲೆ(ಸರ್ವಸಮ್ಸ್ಥೇ) ಆ ಭಗವಂತ’ ಎಂದು. ಸಾಮಾನ್ಯವಾಗಿ ಪ್ರಪಂಚದಲ್ಲಿ ಹುಟ್ಟಿಸಿದವರು, ಪೋಷಿಸುವವರು ಸಂಹಾರ ಮಾಡುವುದಿಲ್ಲ. ಕಾಳಿದಾಸ ಹೇಳುವಂತೆ ಒಬ್ಬ ತಾನು ನೆಟ್ಟು-ಬೆಳೆಸಿದ ಗಿಡ ವಿಷವೃಕ್ಷ ಎಂದು ತಿಳಿದಾಗಲೂ ಕೂಡಾ ಅದನ್ನು ಕಡಿಯಲು ಅವನ ಮನಸ್ಸು ಒಪ್ಪುವುದಿಲ್ಲ. ಆದರೆ ಭಗವಂತ ಹಾಗಲ್ಲ. ಹುಟ್ಟಿಸುವವನೂ ಅವನೇ, ಪಾಲಿಸುವವನೂ ಅವನೇ, ಕೊನೆಗೆ ಸಂಹಾರ ಮಾಡುವವನೂ ಅವನೇ. ಭಗವಂತನಿಗೆ ನಮ್ಮಂತೆ ಯಾವುದೇ ವಿಷಯದಲ್ಲಿ  ಮಮಕಾರವಾಗಲೀ, ದ್ವೇಷವಾಗಲೀ ಇರುವುದಿಲ್ಲ. ಯಾವ ಕಾಲದಲ್ಲಿ ಏನು  ಆಗಬೇಕೋ ಆ ರೀತಿ ಆತ ಎಲ್ಲವನ್ನೂ ನಿರ್ಲಿಪ್ತತೆಯಿಂದ ಮಾಡುತ್ತಾನೆ ಅಷ್ಟೇ.

ನಮಗೆ ಹುಟ್ಟು ಎಂದರೆ ಯಾವುದೋ ಒಂದು ವಸ್ತುವನ್ನು ಪಡೆಯುವುದು. ಅದೇ ರೀತಿ ಸಾವು ಎಂದರೆ ಒಂದು ವಸ್ತುವನ್ನು ಕಳೆದುಕೊಳ್ಳುವುದು. ಹೀಗಾಗಿ ಹುಟ್ಟು ನಮಗೆ ಸುಖವಾಗಿ ಕಂಡರೆ, ಸಾವು ದುಃಖವಾಗಿ ಕಾಡುತ್ತದೆ. ಆದರೆ ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ: ‘ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ    । ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ’ (೨. ೨೨) ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೇವೋ-ಹಾಗೇ, ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತಾನೆ. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಛೆಯಂತೆ ಬಟ್ಟೆ ಬದಲಿಸುತ್ತಾಳೊ, ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ತನ್ನ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು.  ಅವರು ಭಗವಂತನ ಅನುಗ್ರಹದಿಂದ ಸ್ವ-ಇಚ್ಚೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. (ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ "Living with Himalayan Masters" ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು). ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವಇಚ್ಛೆಯಿಂದ  ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ  ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗೂ  ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ. ಇದಕ್ಕಾಗಿಯೇ ಶ್ರೀಕೃಷ್ಣ ಅರ್ಜುನನಿಗೆ ‘ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ’ (ಭಗವದ್ಗೀತೆ ೨- ೧೧) ಎಂದು ಹೇಳಿರುವುದು. ಅರ್ಥಾತ್- ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ.

ಹೀಗಾಗಿ ಸೃಷ್ಟಿ-ಸ್ಥಿತಿಗೆ ಕಾರಣನಾದ ಭಗವಂತನೇ ಯಾವುದೇ ಮಮಕಾರವಿಲ್ಲದೇ ಸಂಹಾರ ಮಾಡುತ್ತಾನೆ. ಆತ ಎಲ್ಲವನ್ನೂ  ಸಮಚಿತ್ತತೆಯಿಂದ ಮಾಡುತ್ತಾನೆ.  ಇದಕ್ಕೊಂದು ಉತ್ತಮ ಉದಾಹರಣೆ ಗಾಂಧಾರಿ ಶ್ರೀಕೃಷ್ಣನಿಗೆ  ‘ನಿನ್ನ ವಂಶ ನಿರ್ವಂಶವಾಗಲಿ’ ಎಂದು ಶಾಪ ಕೊಟ್ಟಾಗ ಆತ ನಡೆದುಕೊಂಡ ರೀತಿ. ಆ ಸಂದರ್ಭದಲ್ಲಿ ಶ್ರೀಕೃಷ್ಣ ಕೋಪಿಸಿಕೊಳ್ಳದೆ, ಮುಗುಳ್ನಗುತ್ತಾ  ಇದು ಪತಿವ್ರತೆಯ ಬಾಯಿಯಲ್ಲಿ ಬಂದ ವರ” ಎಂದು ನಿರ್ವಿಕಾರವಾಗಿ ವಿಷಯಗ್ರಹಣ ಮಾಡುತ್ತಾನೆ. ಯಾದವರಾಗಿ ಭೂಮಿಯಲ್ಲಿ ಅವತರಿಸಿದ್ದ ದೇವತೆಗಳ ಬಂದ ಕಾರ್ಯ ಮುಗಿದಿತ್ತು. ಅಂತಹ ದೇವತೆಗಳು ಹಿಂತಿರುಗಲು ಗಾಂಧಾರಿಯ ಶಾಪ ನಿಮಿತ್ತ ಕಾರಣವಾಯಿತು. ಹೀಗಾಗಿ ಅಲ್ಲಿ ದುಃಖದ ಪ್ರಶ್ನೆಯೇ ಇರಲಿಲ್ಲ.

ಸೃಷ್ಟಿ ಎನ್ನುವುದು ಭಗವಂತನಿಗೊಂದು ಕ್ರೀಡೆ. ಆನಂದದಿಂದಾಡುವ ಈ ಆಟಕ್ಕೆ ಆನಂದವೇ ಪ್ರಯೋಜನ. ತೈತ್ತಿರೀಯ ಉಪನಿಷತ್ತಿನ ಈ ಮಾತು  ಇದಕ್ಕೆ ಪೂರಕವಾಗಿದೆ:  ಕೋ ಹ್ಯೇವಾನ್ಯಾತ್ ಕಃ ಪ್ರಾಣ್ಯಾತ್, ಯದೇಷ ಆಕಾಶ ಆನಂದೋ ನ ಸ್ಯಾತ್”. ಆದ್ದರಿಂದ  ಆನಂದಿಂದ ಆಡುವ ಈ ಆಟದಿಂದ ಭಗವಂತನಿಗೆ  ಇತರ ಯಾವುದೇ ಪ್ರಯೋಜನವಿಲ್ಲ. ಆಟವೇ ಪ್ರಯೋಜನ. ಆದರೆ ಸೃಷ್ಟಿಯಿಂದ ಜೀವರಿಗೆ ಪ್ರಯೋಜನವಿದೆ. ಸೃಷ್ಟಿಯಿಂದಾಗಿ ಸಾತ್ವಿಕರು ಸುಖವನ್ನೂ, ತಾಮಸರು ದುಃಖವನ್ನೂ , ರಾಜಸರು ಸುಖ ಹಾಗು ದುಃಖ ಇವೆರಡನ್ನೂ ಹೊಂದುತ್ತಾ ಸ್ವರೂಪ ಸಾಕ್ಷಾತ್ಕಾರದತ್ತ ಸಾಗುತ್ತಾರೆ.

ಈ ಮೇಲಿನ ಶ್ಲೋಕದಲ್ಲಿ ‘ಬೃಹನ್ತೇ’ ಎನ್ನುವ ವಿಶೇಷ ಪದಬಳಕೆಯನ್ನು ನಾವು ಕಾಣುತ್ತೇವೆ. ಇಂತಹ ಪದ ಬಳಕೆಯ ವಿವರ ಇಂದು ಯಾವುದೇ ಕೋಶದಲ್ಲೂ ಕಾಣಸಿಗುವುದಿಲ್ಲ. ಇದು ವೇದಕಾಲದ ಸಂಸ್ಕೃತ ಶಬ್ದವಾಗಿದೆ. ಬೃಹನ್-ತತಃ à ಬೃಹನ್ತಃ. ಅಂದರೆ ಎಲ್ಲಾ ಕಡೆ ತುಂಬಿರುವ ಪರಮಶಕ್ತಿ ಎಂದರ್ಥ.  ದೊಡ್ಡತನ ಬರುವುದು ಜ್ಞಾನ-ಆನಂದದಿಂದ. ಹಾಗಾಗಿ ಇದು ಎಲ್ಲಕ್ಕಿಂತ ಮೊದಲು, ಎಲ್ಲಾ ಕಾಲದಲ್ಲೂ, ಎಲ್ಲಾ ಕಡೆ ತುಂಬಿರುವ, ಯಾರೂ ಇಲ್ಲದಾಗಲೂ ಇರುವ,  ಜ್ಞಾನಾನಂದಪೂರ್ಣ ಪರಶಕ್ತಿ.  ಭಾಗವತದಲ್ಲಿ ಹೇಳುವಂತೆ ‘ಅನ್ವಯವ್ಯತಿರೇಕಾಭ್ಯಾಂ ಯತ್ ಸ್ಯಾತ್ ಸರ್ವತ್ರ ಸರ್ವದಾ’ (೨.೯.೩೫).   ಆತ ಪ್ರಪಂಚ ಇರುವಾಗಲೂ, ಇಲ್ಲದೇ ಇರುವಾಗಲೂ ಇರುವವನು.  ಎಲ್ಲಾ  ದೇಶ-ಕಾಲದಲ್ಲಿ, ಈ ಪ್ರಪಂಚ ಇರಲೀ-ಇಲ್ಲದೇ ಇರಲಿ, ಯಾರು ಸದಾ ಸ್ವತಂತ್ರನಾಗಿರುತ್ತಾನೋ - ಆತನೇ ‘ದೇವರು’. ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಜೀವ-ಜಡಗಳು ರೂಪವನ್ನು ಪಡೆದು ವ್ಯಕ್ತವಾಗುತ್ತವೆ, ರೂಪ ನಾಶವಾಗಿ ಪರಮಾಣುವಾಗಿ ಅವ್ಯಕ್ತವಾಗುತ್ತವೆ.  ಆದರೆ ಎಲ್ಲಾ ದೇಶ-ಕಾಲದಲ್ಲಿ ನಾಶವಾಗದೇ ಉಳಿಯುವ ಏಕಮಾತ್ರ ತತ್ತ್ವ ಆ ಭಗವಂತ.

ಭಗವಂತ ಎನ್ನುವ ಈ ವಿಶ್ವಶಕ್ತಿಯೇ ಈ ಜಗತ್ತಿನ ಚಾಲನಾಶಕ್ತಿಯಾಗಿರುವ ಬ್ರಹ್ಮಚಕ್ರ.  ಈ ಬ್ರಹ್ಮಚಕ್ರದಲ್ಲಿಯೇ ಇಡೀ ವಿಶ್ವಚಕ್ರ ತಿರುಗುತ್ತಿರುತ್ತದೆ. ಈರೀತಿ ಈ ವಿಶ್ವಶಕ್ತಿ ಸ್ವತಃ ಚಲಿಸಲಾಗದ ಪ್ರಪಂಚಕ್ಕೆ ಚಲನೆ ಕೊಡುವ ಶಕ್ತಿಯಾಗಿದೆ. ಅದನ್ನೇ ವೇದ ‘ಅಗ್ನಿಮೀಳೇ ಪುರೋಹಿತಮ್ ಎಂದು ವಿವರಿಸುತ್ತದೆ. ಹೀಗೆ ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಮೀರಿನಿಂತ ಆ ವಿಶ್ವಚಕ್ರ ತಿರುಗುತ್ತಿರುತ್ತದೆ. ಆ ವಿಶ್ವಚಕ್ರದಲ್ಲಿ ಎಲ್ಲವೂ ಸುತ್ತುತ್ತಿರುತ್ತದೆ.

   ಇಲ್ಲಿ ‘ಹಂಸ’ ಎನ್ನುವ ವಿಶೇಷ ಪದಬಳಕೆಯಾಗಿರುವುದನ್ನು ನಾವು ಗಮನಿಸಬೇಕು.  ವೇದಕಾಲದಲ್ಲಿ ಬಳಸುತ್ತಿದ್ದ ಪ್ರತಿಯೊಂದು ಶಬ್ದಕ್ಕೂ ಒಂದು ನಿರ್ವಚನ ಇದ್ದೇ ಇರುತ್ತಿತ್ತು. ಹಂಸ ಎನ್ನುವ ಪದ ‘ಹನ’ ಧಾತುವಿನಿಂದ ಬಂದಿರುವುದಾಗಿದೆ.  ಹನ್ತೀತಿ ಹಂಸಃ’ . ಹನ್ತಿ ಎಂದರೆ ‘ಚರತಿ. ಸ್ವರ್ಗ-ನರಕ-ಭೂಮಿ ಎನ್ನುವ ಸುಖ-ದುಃಖ ಚಕ್ರದಲ್ಲಿ ತಿರುಗುತ್ತಿರುವ ಜೀವಗಳೇ ಹಂಸಗಳು. ಆದ್ದರಿಂದ ಈ ಬ್ರಹ್ಮಚಕ್ರದಲ್ಲಿ ಸಮಸ್ತ ಜೀವಚಕ್ರವೂ ತಿರುಗುತ್ತಿರುತ್ತದೆ.

‘ಹನ’ ಧಾತುವಿಗೆ ‘ಹಿಂಸಾ(ನಾಶ), ‘ಗತಿ (ಜ್ಞಾನ) ಎನ್ನುವ ಅರ್ಥವೂ ಇದೆ. ಮೊದಲು ಅರಿವುಗೇಡಿಯಾಗಿ ಸ್ವರ್ಗ-ನರಕ-ಭೂಮಿಯಲ್ಲಿ ಸುತ್ತಿದ ಜೀವದಲ್ಲಿ ಒಳಗಿನಿಂದ ಅರಿವು ಮೂಡಿದಾಗ, ಅದು  ತನ್ನ ಸಂಸಾರದ ಅಂಟನ್ನು ತೊರೆದು, ಸ್ವರ್ಗ-ನರಕ-ಭೂಮಿ ಎನ್ನುವ ಚಕ್ರ ಹಾಗು ದೇಹದಲ್ಲಿನ  ಷಟ್ ಚಕ್ರ ಭೇದಿಸಿ ಸಹಸ್ರಾರದಿಂದ ಮೇಲೇರುತ್ತದೆ. ಈ ಸ್ಥಿತಿಯಲ್ಲಿ ಜೀವಕ್ಕೆ  ‘ತಾನು ತಾನಾಗಿ ಏನನ್ನೂ ಮಾಡಲು ಶಕ್ತನಲ್ಲ, ಎಲ್ಲವನ್ನೂ ನಿಯಂತ್ರಿಸತಕ್ಕ ಪರಶಕ್ತಿ ತನ್ನೊಳಗೇ ಇದ್ದು ತನ್ನನ್ನು ನಿಯಂತ್ರಿಸುತ್ತದೆ’ ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ‘ನನ್ನೊಳಗಿರುವ ‘ಪೃಥಕ್ ಆತ್ಮ’ ನನ್ನನ್ನು ಪ್ರೇರೇಪಿಸುತ್ತಿದೆ, ಅದರ ಪ್ರೇರಣೆಯಂತೆ ಎಲ್ಲವೂ ನಡೆಯುತ್ತದೆ’ ಎನ್ನುವ ಅರಿವು ಜೀವಕ್ಕಾಗುತ್ತದೆ.

ಋಗ್ವೇದದಲ್ಲಿ ಹೇಳುವಂತೆ ‘ನ ತಂ ವಿದಾಥ ಯ ಇಮಾ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ|  (೧೦.೦೮೨.೦೭). ಈ ಮಾತಿನ ವ್ಯಾಖ್ಯಾನವನ್ನೇ ಮೇಲಿನ ಶ್ಲೋಕದ ಉತ್ತರಾರ್ಧದಲ್ಲಿ ನಾವು ಕಾಣುತ್ತೇವೆ. ಸೃಷ್ಟಿ ಮಾಡುವ ಆ ಮಹಾಶಕ್ತಿ ನಮಗೆ ತಿಳಿದಿಲ್ಲ. ಏಕೆಂದರೆ ಅದು ನಮ್ಮೆಲ್ಲಾ ತಿಳುವಳಿಕೆಗೆ ಮೀರಿದ ವಸ್ತು. ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳುವಂತೆ  ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’. ನಮ್ಮ ಮನಸ್ಸಿನಿಂದಾಗಲೀ ಅಥವಾ ಮಾತಿನಿಂದಾಗಲೀ ಅಥವಾ ನಮ್ಮಲ್ಲಿರುವ ಇತರ ಯಾವುದೇ ಉಪಕರಣಗಳಿಂದಾಗಲೀ ಅವನನ್ನು ತಿಳಿಯಲು, ತಿಳಿದು ವರ್ಣಿಸಲು ಸಾಧ್ಯವಿಲ್ಲ. ಅವನನ್ನು ನಾವು ತಿಳಿಯಬೇಕಾದರೆ  ಅವನೇ ನಮಗೆ ಅರಿವೆಂಬ ಅನುಭವ ಕೊಡಬೇಕು.  ಕಠೋಪನಿಷತ್ತಿನಲ್ಲಿ ಹೇಳುವಂತೆ ಯಮೇವೈಷ ವೃಣುತೇ ತೇನ ಲಭ್ಯಃ  ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್ (೧.೨.೨೩). ಯಾವಾಗ ಭಗವಂತ ಪ್ರಸನ್ನನಾಗುತ್ತಾನೋ, ಆಗ ಆತ ನಮ್ಮ ತಲೆಯಲ್ಲಿ ಬಂದು ಕೂರುತ್ತಾನೆ. ಅಹಂಕಾರವಿಲ್ಲದ ತನ್ಮಯತೆ, ಜ್ಞಾನಪೂರ್ವಕ ಭಕ್ತಿಗೆ ಭಗವಂತ ತೆರೆದುಕೊಳ್ಳುತ್ತಾನೆ. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ‘ಜ್ಞಾನೀ ತ್ವಾತ್ಮೈವ ಮೇ ಮತಮ್’ (೭.೧೮) ಎಂದಿರುವುದು. ಜ್ಞಾನಿಗಳಿಗೆ ಭಗವಂತ ಬಹಳ ಬೇಗ ಪ್ರೀತನಾಗುತ್ತಾನೆ. ಭಗವಂತ ಪ್ರೀತನಾದಾಗ ಆತನ ಜ್ಞಾನಾನಂದಮಯವಾದ ಸ್ವರೂಪದರ್ಶನ ನಮ್ಮ  ಆತ್ಮಸ್ವರೂಪಕ್ಕಾಗುತ್ತದೆ. ಈ ಸ್ಥಿತಿಯಲ್ಲಿ ಜೀವ ‘ಅಮೃತತ್ವ’ವನ್ನು  ಅಂದರೆ ಹುಟ್ಟು-ಸಾವಿನ ಚಕ್ರಭ್ರಮಣವನ್ನು ದಾಟಿ ಸಾವಿಲ್ಲದ ತಾಣವನ್ನು(ಮೋಕ್ಷವನ್ನು) ಹೊಂದುತ್ತಾನೆ. ‘ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ’ ಎನ್ನುವ ಶಾಂತಿ ಮಂತ್ರ ಹೇಳುವುದೂ ಇದನ್ನೇ.

 

ಸಂಯುಕ್ತಮೇತತ್ ಕ್ಷರಮಕ್ಷರಂ ಚ ವ್ಯಕ್ತಾವ್ಯಕ್ತಂ ಭರತೇ ವಿಶ್ವಮೀಶಃ

ಅನೀಶಶ್ಚಾತ್ಮಾ ಬಧ್ಯತೇ ಭೋಕ್ತೃಭಾವಾಜ್  ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ ೦೧-೦೮

 

ಈ ಜಗತ್ತೆಂದರೆ ಅದು ನಾಶವಾಗದ(ಅಕ್ಷರ) ಮತ್ತು ನಾಶವಾಗುವ(ಕ್ಷರ) ವಸ್ತುಗಳ ಮಿಶ್ರಣ. ಉದಾಹರಣೆಗೆ ಒಂದು ದೇಹ. ಅದು ನಾಶವಾಗುವಂತಹದ್ದು. ಆದರೆ ಅದರೊಳಗಿನ ಜೀವಕ್ಕೆ ನಾಶವಿಲ್ಲ. ಹೀಗೆ ಸಾಯದೇ ಇರುವುದು ಸಾಯುವುದರೊಳಗೆ ಸೇರಿ ಈ ಪ್ರಪಂಚವಾಗಿದೆ. ಯಾವುದು ನಾಶವಾಗುತ್ತದೋ ಅದು ವ್ಯಕ್ತ. ನಾಶವಾಗದ್ದು ಅವ್ಯಕ್ತ. ಇಂತಹ ಚೇತನಾಚೇತ  ಪ್ರಪಂಚವನ್ನು ವಿಶ್ವ ಎನ್ನುತ್ತಾರೆ. ಒಂದು ದಿನ ಬಿದ್ದು ಹೋಗುವ ವ್ಯಕ್ತ ಶರೀರ, ಎಂದೂ ಬೀಳದ ಅಕ್ಷರವಾಗಿರುವ ಅವ್ಯಕ್ತ ಜೀವ, ಇವೆರಡರ ಸಂಯೋಗವೇ ಹುಟ್ಟು, ವಿಯೋಗವೇ ಸಾವು.

  ಯಾರು ಇವೆರಡನ್ನು ಜೊತೆಗಿಟ್ಟವನು? ಒಂದು ದಿನ ಇವೆರಡನ್ನೂ ಬೇರ್ಪಡಿಸುವವನು ಯಾರು? ಈ ಪ್ರಶ್ನೆಗೆ ಉತ್ತರಿಸುತ್ತಾ ಋಷಿಗಳು ಆ ವಿಶ್ವಶಕ್ತಿಯನ್ನು ‘ಈಶಃ’ ಎಂದು ಕರೆದಿದ್ದಾರೆ. ಈಶಃ ಎಂದರೆ ಸರ್ವಸಮರ್ಥ ಎಂದರ್ಥ. ತಾಯಿಯ ಗರ್ಭದಲ್ಲಿ ದೇಹ ನಿರ್ಮಾಣ ಮಾಡುವ ಶಿಲ್ಪಿ ಅವನು, ಆ ದೇಹದೊಳಗೆ ಜೀವವನ್ನು ಕೂರಿಸುವವನು ಅವನು, ಒಂದು ದಿನ ಅದು ಭೂಮಿಗೆ ಬೀಳುವಂತೆ ಮಾಡುವವನು ಅವನು, ನಂತರ ಆಯಾ ಕಾಲದಲ್ಲಿ ನಡೆಯಬೇಕಾದ್ದನ್ನು ನಡೆಸುವವನು ಅವನು. ಹೀಗೆ ನಮ್ಮ ಅಸ್ತಿತ್ವಕ್ಕೆ ಕಾರಣ ಎಲ್ಲವನ್ನೂ ಧಾರಣೆಮಾಡಿರುವ,  ಎಲ್ಲವುದರ ಜವಾಬ್ಧಾರಿ ಹೊತ್ತ ಸರ್ವಸಮರ್ಥ ಶಕ್ತಿಯಾದ ಆ ಭಗವಂತ(ವಿಶ್ವಮೀಶಃ).  

ಈ ಕ್ಷರ-ಅಕ್ಷರ, ವ್ಯಕ್ತ-ಅವ್ಯಕ್ತಗಳ ಸಮಾಗಮವಾಗಿರತಕ್ಕಂತಹ ಈ ಸಂಸಾರವನ್ನು ಸರ್ವಸಮರ್ಥನಾದ ಭಗವಂತ ಅಂಟಿಸಿಕೊಳ್ಳದೇ ಭರಿಸಿಕೊಂಡಿದ್ದಾನೆ(ಹೊತ್ತಿದ್ದಾನೆ). ಆದರೆ ದುರ್ಬಲನಾದ ಜೀವ ಇದಕ್ಕೆ ತನ್ನನ್ನು ಅಂಟಿಸಿಕೊಂಡು ಬದ್ಧನಾಗಿ ಸಿಕ್ಕಿಹಾಕಿಕೊಂಡಿದ್ದಾನೆ. ಯಾವುದನ್ನೂ ಮೀರುವ ಶಕ್ತಿ ಈ ಜೀವನಿಗಿಲ್ಲ. ಒಬ್ಬ ಈಶಃ ಇನ್ನೊಬ್ಬ ಅನೀಶ. ಈ ದೇಹದೊಳಗೆ ಅನೀಶನಾದ ಜೀವ ಸಿಕ್ಕಿಹಾಕಿಕೊಂಡು ಸಂಸಾರಿಯಾಗಿದ್ದಾನೆ.

ಮೂಲತಃ ಜ್ಞಾನಾನಂದಸ್ವರೂಪನಾದ ಜೀವ ದೇಹಕ್ಕೆ ಏಕೆ ಅಂಟಿಕೊಂಡ? ಅವನು ಅದರಿಂದ ಪಾರಾಗುವ ವಿಧಾನ ಯಾವುದು? ಇದು ಇಲ್ಲಿರುವ ಮೂಲಭೂತ ಪ್ರಶ್ನೆ. ಇದಕ್ಕೆ ಕಾರಣ ನಮ್ಮಲ್ಲಿರುವ  ಅಹಂಕಾರ ಮತ್ತು ಮಮಕಾರ. ಇವೆರಡನ್ನು  ಕಳಚಿಕೊಂಡಾಗ ನಾವು ಸಂಸಾರಬಂಧನದಿಂದ ಬಿಡುಗಡೆ ಹೊಂದಬಹುದು. ನಮ್ಮೆಲ್ಲಾ ದುಃಖಕ್ಕೆ ಮೂಲ ಕಾರಣ ನಾನು-ನನ್ನದು-ನನ್ನಿಂದ ಎನ್ನುವ ತಪ್ಪು ತಿಳುವಳಿಕೆ. ನಾವು ಯಾವುದೋ ಒಂದನ್ನು ಹಚ್ಚಿಕೊಳ್ಳುತ್ತೇವೆ. ಅದು ನಾವು ಅಂದುಕೊಂಡಂತೆ ಇಲ್ಲದಾಗ ನಮಗೆ ದುಃಖವಾಗುತ್ತದೆ. ನಾವು ಬಯಸಿದ್ದು ಘಟಿಸಿದಾಗ ಖುಷಿ, ಇಲ್ಲದಾಗ ದುಃಖ. ಹೀಗೆ ನಮ್ಮದೇ ಆದ ಚೌಕಟ್ಟು ನಮ್ಮನ್ನು ಬಂಧಿಸುತ್ತದೆ. ಮಮಕಾರ-ಅಭಿಮಾನ ಎನ್ನುವ ಪಾಶದಿಂದ ನಾವು ನಮ್ಮನ್ನು ಕಟ್ಟಿಹಾಕಿಕೊಂಡು ನಾವು ಅದಕ್ಕೆ ಬದ್ಧರು ಎಂದುಕೊಳ್ಳುತ್ತೇವೆ. ಜಡಪ್ರಪಂಚವನ್ನು ನಾವು ನಮ್ಮ ಭೋಗದ ವಸ್ತುವಾಗಿಯೂ, ಶರೀರವನ್ನು ಭೋಗದ ಸಾಧನವಾಗಿಯೂ ತಿಳಿದು, ಶರೀರದ ಮುಖೇನ ಭೋಗಿಸುವವನು ‘ನಾನುಎಂದುಕೊಳ್ಳುತ್ತೇವೆ. ಈರೀತಿ ಭಗವಂತನನ್ನು ಮರೆತ ಅಹಂಕಾರ ಮಮಕಾರವೇ ಸಂಸಾರ ಬಂಧಕ್ಕೆ ಮೂಲ ಕಾರಣ. ಈ ಎಲ್ಲಾ ಪಾಶದಿಂದ ಬಿಡುಗಡೆ ಹೊಂದಲು ಇರುವ ಮಾರ್ಗ ‘ನನ್ನದಲ್ಲ ಎಂದು ತಿಳಿದುಕೊಳ್ಳುವುದು.  ‘ಯಾರು ಈ ಪ್ರಪಂಚದಲ್ಲಿ ಎಲ್ಲವನ್ನೂ ನಿರ್ವಹಿಸುತ್ತಾನೋ  ಅವನೇ ಎಲ್ಲವನ್ನೂ ನಿಯಂತ್ರಿಸುತ್ತಾನೆ. ಇಲ್ಲಿ ನಾನೊಂದು ಉಪಕರಣ ಅಷ್ಟೇ.  ಹೀಗಾಗಿ ನಾನು-ನನ್ನದು-ನನ್ನಿಂದ ಎಂದು ಭ್ರಮಿಸಿಕೊಂಡು ಮುಳುಗುವುದರಲ್ಲಿ ಯಾವ ಅರ್ಥವೂ ಇಲ್ಲಾ’ ಎನ್ನುವ ಎಚ್ಚರ ಬಂದಾಗ ಜೀವ ಬಂಧನದಿಂದ ಬಿಡುಗಡೆಯತ್ತ ಸಾಗುತ್ತಾನೆ.

ಅಹಂಕಾರ ಮತ್ತು ಮಮಕಾರ ಇಲ್ಲದ ಸ್ಥಿತಿಗೆ ಶಾಸ್ತ್ರಕಾರರು ನೀಡುವ ದೃಷ್ಟಾಂತ ನಿದ್ರೆಯ ಸ್ಥಿತಿ. ಅಲ್ಲಿ ಯಾವ ಬಂಧನವೂ ನಮ್ಮನ್ನು ಕಾಡುವುದಿಲ್ಲ. ಆದರೆ ಎಚ್ಚರವಾದ ಕ್ಷಣದಲ್ಲಿ ಮತ್ತೆ ಎಲ್ಲವೂ ಮರಳಿ ನಮ್ಮನ್ನು ಕಾಡುತ್ತದೆ. ನಾವು ಎಚ್ಚರದಲ್ಲೂ ನಿದ್ರೆಯ ಆ ಸ್ಥಿತಿಯನ್ನು ಹೊಂದಬೇಕು. ಅದೇ ಬಿಡುಗಡೆಯ ದಾರಿ.

ಈ ಶ್ಲೋಕದಲ್ಲಿ ‘ದೇವಃ’ ಎನ್ನುವ ವಿಶೇಷ ಪದ ಬಳಕೆಯಾಗಿರುವುದನ್ನು ನಾವು ಗಮನಿಸಬೇಕು.  ಇದೊಂದು ಅಪೂರ್ವ ಶಬ್ದ. ಸಂಸ್ಕೃತದಲ್ಲಿ ಈ ಪದಕ್ಕೆ ಅನೇಕ ಅಪೂರ್ವ ಅರ್ಥಗಳನ್ನು ನಾವು ಕಾಣುತ್ತೇವೆ. ದೇವಃ ಎನ್ನುವ ಪದ ಮೂಲತಃ 'ದಿವು' ಎನ್ನುವ ಧಾತುವಿನಿಂದ ಹುಟ್ಟಿದ ಶಬ್ದ. ಪ್ರಾಚೀನ ಧಾತುಪಾಠದಲ್ಲಿ ಈ ಧಾತುವಿಗೆ ಏಳು ಅರ್ಥಗಳನ್ನು ನಾವು ಕಾಣುತ್ತೇವೆ. ದಿವು ಕ್ರೀಡಾ,ವಿಜಿಗೀಷಾ,ವ್ಯವಹಾರೇ,ದ್ಯುತಿ,ಸ್ತುತಿ,ಕಾಂತಿ, ಗತಿಷು. ಇವೇ ಆ ಏಳು ಅರ್ಥಗಳು.  ೧. ಕ್ರೀಡಾ: ಯಾವ ತತ್ತ್ವಕ್ಕೆ ಈ ಇಡೀ ವಿಶ್ವದ ನಿರ್ಮಾಣ ಎನ್ನುವುದು ಒಂದು ಕ್ರೀಡೆಯೋ ಅವನು ದೇವರು. ೨. ವಿಜಿಗೀಷಾ: ಯಾವುದು ಎಲ್ಲಕ್ಕಿಂತ ದೊಡ್ಡದೋ ಅವನು ದೇವರು ೩. ವ್ಯವಹಾರೇ: ಜಗತ್ತಿನ ಸಮಸ್ತ ವ್ಯವಹಾರಗಳನ್ನು ಮಾಡುವ ಮೂಲಶಕ್ತಿ ‘ದೇವರು’.  ೪. ದ್ಯುತಿ:  ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್ । ಯಚ್ಚಂದ್ರಮಸಿ ಯಚ್ಚಾಗ್ನೌ ತತ್  ತೇಜೋ ವಿದ್ಧಿ ಮಾಮಕಮ್’(ಭಗವದ್ಗೀತೆ ೧೫-೧೨). ಯಾವುದು ಎಲ್ಲಾ ಬೆಳಕುಗಳನ್ನು ಬೆಳಗಿಸುವ ಮಹಾಬೆಳಕೋ ಆ ಮೂಲಜ್ಯೋತಿ ‘ದೇವರು  ೫. ಸ್ತುತಿ: ಜಗತ್ತಿನ ಸಮಸ್ತ ಶಬ್ದಗಳು ಅಂತತಃ ಯಾರನ್ನು ಸ್ತುತಿ ಮಾಡುತ್ತವೋ ಅವನು ‘ದೇವರು ೬. ಕಾಂತಿ:  ಈ ಪದಕ್ಕೆ ಪ್ರಕಾಶ ಎನ್ನುವ ಅರ್ಥವಿದೆ. ಆದರೆ ಈ ಪದದ ಮೂಲ ಅರ್ಥ ‘ಇಚ್ಛೆ’.  ಯಾರ ಇಚ್ಛೆ ಎಂದೂ ಹುಸಿಯಾಗುವುದಿಲ್ಲವೋ, ಯಾರು ಸತ್ಯ ಸಂಕಲ್ಪನೋ, ಯಾರು ಇಚ್ಛಾಮಾತ್ರದಿಂದ ಸಮಸ್ತವನ್ನು ನಿಯಂತ್ರಿಸಬಲ್ಲನೋ,  ಅವನು ದೇವರು. ೭. ಗತಿಷು: ಯಾರು ಎಲ್ಲಾ ಕಡೆ ತುಂಬಿದ್ದಾನೋ, ಯಾರು ಎಲ್ಲವನ್ನೂ ಬಲ್ಲ ಸರ್ವಜ್ಞನೋ ಅವನು ದೇವರು. ಹೀಗೆ ‘ದೇವ ಎನ್ನುವ ಪದ ನಾವು ಭಗವಂತನ ಬಗೆಗೆ ಚಿಂತನೆ ಮಾಡಬೇಕಾದ ಎಲ್ಲಾ ಗುಣಗಳನ್ನು ಸಮಷ್ಠಿಯಾಗಿ ಹೇಳುವ ಬಹಳ ಸುಂದರವಾದ ಶಬ್ದ.  ಈ ರೀತಿ ‘ಒಬ್ಬ ಸತ್ಯಸಂಕಲ್ಪ ಇದ್ದಾನೆ, ಅವನು ಸರ್ವಗತನಾಗಿ ಎಲ್ಲರ ಒಳಗೂ ಹೊರಗೂ ತುಂಬಿದ್ದಾನೆ,  ಅವನು ಎಲ್ಲವನ್ನೂ ನಿಯಂತ್ರಿಸತಕ್ಕ ಸರ್ವಜ್ಞ,  ಅವನ ಇಚ್ಛೆಯಂತೆಯೇ ಜಗತ್ತಿನ ಸಮಸ್ತ ವ್ಯವಹಾರವೂ ನಡೆಯುತ್ತದೆ’ ಎನ್ನುವ ಸತ್ಯವನ್ನು ತಿಳಿದಾಗ ನಾನು-ನನ್ನದು-ನನ್ನಿಂದ-ನನಗೋಸ್ಕರ-ನನಗೆ-ನನ್ನ ಇತ್ಯಾದಿ ವಿಭಕ್ತಿಗಳು(ಪಾಶಗಳು) ಅರ್ಥಶೂನ್ಯವಾಗಿ,  ಶುದ್ಧ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ಈ ರೀತಿ ನಾನು-ನನ್ನದು ಎನ್ನುವುದು ಯಾವುದೂ ಇಲ್ಲಾ, ಎಲ್ಲವನ್ನೂ ನನ್ನೊಳಗೆ ನಿಂತ ಆ ಭಗವಂತ ಮಾಡಿಸುತ್ತಿದ್ದಾನೆ’ ಎನ್ನುವ ಪ್ರಜ್ಞೆ ಬೆಳೆದಾಗ ಜೀವ ದುಃಖದಿಂದ ಪಾರಾಗುತ್ತಾನೆ. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ‘ನಿಮಿತ್ತಮಾತ್ರಂ ಭವ ಸವ್ಯಸಾಚಿ’ ಎಂದು ಹೇಳಿರುವುದು. ಎಲ್ಲದರ ಹಿಂದಿರುವ ಭಗವದ್ ಶಕ್ತಿ ಎಲ್ಲವನ್ನೂ ಮಾಡಿಸುತ್ತಿದೆ. ನಾನು ಕೇವಲ ಉಪಕರಣ(Instrument) ಎನ್ನುವ ಮನೋವೃತ್ತಿ ಬೆಳೆದಾಗ ಮನುಷ್ಯ ನಿರ್ಲಿಪ್ತನಾಗಿ ಎತ್ತರಕ್ಕೇರುತ್ತಾನೆ.

 

ಜ್ಞಾಜ್ಞೌ ದ್ವಾವಜಾವೀಶನೀಶಾವಜಾ ಹ್ಯೇಕಾ ಭೋಕ್ತೃಭೋಗ್ಯಾರ್ತ್ಥಯುಕ್ತಾ

ಅನನ್ತಶ್ಚಾತ್ಮಾ ವಿಶ್ವರೂಪೋ ಹ್ಯಕರ್ತ್ತಾ ತ್ರಯಂ ಯದಾ ವಿನ್ದತೇ ಬ್ರಹ್ಮಮೇತತ್ ॥೦೧-೦೯

 

ಈ ಜಗತ್ತಿನಲ್ಲಿ ಅನಾದಿಕಾಲದಿಂದ ಎರಡು ಶಕ್ತಿಗಳಿವೆ. ಒಂದು ‘ಜ್ಞಾ’, ಇನ್ನೊಂದು ‘ಅಜ್ಞ’.  ಅಂದರೆ ಒಂದು ಸರ್ವಜ್ಞನಾದ  ಭಗವಂತ ಹಾಗೂ ಇನ್ನೊಂದು ಅಜ್ಞಾನವನ್ನು ಅಂಟಿಸಿಕೊಂಡಿರುವ ಜೀವ. ಅನಾದಿಕಾಲದಿಂದ ಈ ಪರಂಪರೆ ಬೆಳೆದುಬಂದಿದೆ. ಭಗವಂತನ ಸರ್ವಜ್ಞತ್ವ ಅನಂತವಾದುದು. ಆದರೆ ಅನಾದಿಯಾದ ಜೀವದ ಅಜ್ಞಾನ ಅನಂತವಲ್ಲ. ಅದು ಒಂದು ದಿನ ಕಳಚಿಕೊಳ್ಳುವಂತಹದ್ದು.  ಇಲ್ಲಿ  ಭಗವಂತ  ಈಶ  ಅಂದರೆ ಸರ್ವಸಮರ್ಥ, ಆದರೆ  ಜೀವ ‘ಅನೀಶ ಅಂದರೆ ದುರ್ಬಲ.

 ಜ್ಞಾನಾನಂದ ಸ್ವರೂಪನಾದ ಜೀವನಿಗೆ ಅಜ್ಞಾನ ಅಂಟಿಕೊಂಡಿದ್ದು ಹೇಗೆ ಎಂದರೆ ಇಲ್ಲಿ ಹೇಳುತ್ತಾರೆ: ‘ಅನಾದಿಕಾಲದಿಂದ ಇರುವ ಪ್ರಕೃತಿ ಬಂಧವೇ  ಜೀವದ ಅಜ್ಞಾನಕ್ಕೆ ಕಾರಣ’ ಎಂದು. ಭೋಕ್ತೃ ಜೀವದ  ಭೋಗ್ಯಕ್ಕಾಗಿ ಜಡಪ್ರಕೃತಿ ಇದೆ.  ಭೋಕ್ತೃ-ಭೋಗ್ಯ ಸಂಬಂಧವೇ ಸಂಸಾರ.

ವಿಶ್ವರೂಪೋಪಿ-ಅಕರ್ತ’ ಭಗವಂತ ಎಲ್ಲವನ್ನೂ ಮಾಡುತ್ತಾನೆ ಆದರೆ ಏನನ್ನೂ ಮಾಡುವುದಿಲ್ಲ ! ಏನಿದರ ಅರ್ಥ?  ಸರ್ವಕರ್ತಾ ನ ಕ್ರಿಯತೇ’ ಅಂದರೆ ಭಗವಂತ ಎಲ್ಲವನ್ನೂ ಮಾಡುತ್ತಾನೆ, ಆದರೆ ಎಲ್ಲವನ್ನೂ ನಿರ್ಲಿಪ್ತನಾಗಿ ಮಾಡುತ್ತಾನೆ. ಆತನಿಗೆ ಯಾವುದೇ ಅಭಿಮಾನ ಅಥವಾ ಮಮಕಾರವಿಲ್ಲ. ಆದರೆ ಜೀವರು ತಮ್ಮ ಅಭಿಮಾನದಿಂದ ಭೋಕ್ತನಾಗಿ ಸಂಸಾರದಲ್ಲಿ ಬಂಧಿಯಾಗುತ್ತಾನೆ. ಋಗ್ವೇದದ(೧.೧೬೪.೨೦) ಅಸ್ಯವಾಮೀಯ ಸೂಕ್ತದಲ್ಲಿ ಹೇಳುವಂತೆ ‘ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿ ಚಾಕಶೀತಿ’. ಎರಡು ಹಕ್ಕಿಗಳಿವೆ, ಅದರಲ್ಲಿ ಒಂದು ಹಕ್ಕಿ ಅಶ್ವತ್ಥ ಹಣ್ಣನ್ನು ಇಷ್ಟಪಟ್ಟು ಆಸ್ವಾದಿಸಿ ತಿನ್ನುತ್ತಿದೆ ಮತ್ತು ದುಃಖಪಡುತ್ತಿದೆ. ಇನ್ನೊಂದು ಹಕ್ಕಿ ಹಣ್ಣನ್ನು ತಿನ್ನುತ್ತಿಲ್ಲ ಮತ್ತು ಸಂತೋಷವಾಗಿದೆ. ಇದು ಭಗವಂತ-ಜೀವ-ಜಡಪ್ರಕೃತಿಯ ಕಥೆ. ಈ ಮೂರನ್ನು  ನಾವು ಯಾವಾಗ ತಿಳಿದು ನಿರ್ಲಿಪ್ತತೆಯನ್ನು ಹೊಂದುತ್ತೇವೋ, ಆಗ  ಬ್ರಹ್ಮವನ್ನು(ಪರಿಪೂರ್ಣತೆಯನ್ನು) ಪಡೆಯುತ್ತೇವೆ. ಅಂದರೆ ಈ ಅರಿವಿನ ಸ್ಥಿತಿಯಲ್ಲಿ ಜೀವ ಸಂಸಾರ ಬಂಧವನ್ನು ಕಳಚಿಕೊಂಡು ಮುಕ್ತನಾಗುತ್ತಾನೆ.    

ಈ ಶ್ಲೋಕದಲ್ಲಿ ‘ಶನೀಶಾ ಮತ್ತು ಬ್ರಹ್ಮಮ್’ ಎನ್ನುವ ಎರಡು ವಿಶೇಷ ಪದ ಪ್ರಯೋಗವನ್ನು ಕಾಣುತ್ತೇವೆ.  ‘ಅನೀಶ’ ಎನ್ನುವಲ್ಲಿ ಒಂದು ಅಕ್ಷರ ತೆಗೆದು ಹೇಳಿದರೆ, ‘ಬ್ರಹ್ಮ’ ಎನ್ನುವಲ್ಲಿ ‘ಅನುಸ್ವಾರ ಸೇರಿಸಿ ಹೇಳಿದ್ದಾರೆ. ಈ ರೀತಿ ಪ್ರಯೋಗಕ್ಕೆ ವಿಶೇಷ ಅರ್ಥವಿದೆ. ಧೀರ್ಘ, ಬಿಂದು, ಅನುಸ್ವಾರ ಇವೆಲ್ಲವೂ ಅವಧಾರಣಾರ್ಥಕಗಳು. ಬ್ರಹ್ಮ  ಎನ್ನುವುದನ್ನು ಬ್ರಹ್ಮಮ್ ಎಂದು ಹೇಳಿದಾಗ ಅಲ್ಲಿ ಪೂರ್ಣತೆಯ ಅವಧಾರಣೆ ಮಾಡಿದಂತಾಯಿತು. ಅಂದರೆ ಅಲ್ಲಿ ಅಪೂರ್ಣತೆಯ ಲವಲೇಶವೂ ಇಲ್ಲಾ ಎಂದು ಹೇಳುವ ಪ್ರಯೋಗವಾಗುತ್ತದೆ. ಇನ್ನು ‘ಅನೀಶ’ ಎನ್ನುವಲ್ಲಿ ಕೇವಲ ‘ನೀಶ’ ಎಂದು ಒಂದು ಅಕ್ಷರ ತೆಗೆದು ಹೇಳಿದಾಗ ಅದು ಅಲ್ಪತ್ವವನ್ನು ಎತ್ತಿ ಹೇಳುವ ಪ್ರಯೋಗವಾಗುತ್ತದೆ. ಇದು ಸಂಸ್ಕೃತ ಭಾಷೆಯ ಸೊಗಸು.  ಕನ್ನಡದಲ್ಲೂ ಶಬ್ದ ಪ್ರಯೋಗದಿಂದ ಆಧಿಕ್ಯವನ್ನು ಹೇಳುವುದನ್ನು ನಾವು ಕಾಣಬಹುದು. ಉದಾಹರಣೆಗೆ: ಅನೂ..ಪಮ, ಬಹಾ..ಳ, ತುಂಂ..ಬಾ, ಇತ್ಯಾದಿ.

  

 ಕ್ಷರಂ ಪ್ರಧಾನಮಮೃತಾಕ್ಷರಂ ಹರಃ  ಕ್ಷರಾತ್ಮಾನಾವೀಶತೇ ದೇವ ಏಕಃ

ತಸ್ಯಾಭಿಧ್ಯಾನಾದ್ಯೋಜನಾತ್ತತ್ತ್ವಭಾವಾದ್ ಭೂಯಶ್ಚಾಂತೇ ವಿಶ್ವಮಾಯಾನಿವೃತ್ತಿಃ ॥೦೧-೧೦

 

ಹಿಂದೆ ಹೇಳಿದ ವಿಷಯವನ್ನು ಇಲ್ಲಿ ಇನ್ನೊಂದು ಆಯಾಮದಲ್ಲಿ ಹೇಳಲಾಗಿದೆ. ‘ಕ್ಷರಂ ಪ್ರಧಾನಮ್’ ಎನ್ನುವಲ್ಲಿ ‘ಪ್ರಧಾನ’ ಎಂದರೆ ಪ್ರಕೃತಿ-ನಿರ್ಮಿತ ಎಂದರ್ಥ. ಮೂಲಪ್ರಕೃತಿಗೆ ನಾಶವಿಲ್ಲ, ಆದರೆ ಅದರ ವಿಕಾರಗಳು ನಾಶವಾಗುತ್ತದೆ. ಉದಾಹರಣೆಗೆ ಪಂಚಭೂತಗಳಿಂದಾದ ನಮ್ಮ ಶರೀರ. ಅದು ಒಂದು ದಿನ ನಾಶವಾಗುತ್ತದೆ. ನಾವು ಕ್ಷರವಾದ ಯಾವ ಜಡವನ್ನು ಅಂಟಿಸಿಕೊಂಡಿದ್ದೆವೋ, ಅದರಿಂದ ಪೂರ್ತಿಯಾಗಿ ಕಳಚಿಕೊಂಡು ಜ್ಞಾನಾನಂದಸ್ವರೂಪರಾಗಬೇಕು.

ನಮಗೆ ಪಾಂಚಭೌತಿಕವಾದ ಮೂರು ಆವರಣಗಳಿವೆ. ಈ ಮೂರು ಆವರಣಗಳೊಳಗೆ ಜ್ಞಾನಾನಂದಮಯವಾದ ಆತ್ಮಸ್ವರೂಪವಿದೆ. ಲಿಂಗಶರೀರ, ಸೂಕ್ಷ್ಮಶರೀರ ಮತ್ತು ಸ್ಥೂಲಶರೀರ ಇವೇ ಆತ್ಮವನ್ನು ಆವರಿಸಿರುವ ಆ ಮೂರು ಆವರಣಗಳು. ನಾವು ಈ ಮೂರು ಅಂಗಿಗಳನ್ನು ಕಳಚಿ, ಅಶುಭದಿಂದ ಬಿಡುಗಡೆಹೊಂದಿ, ಸ್ವರೂಪಭೂತವಾದ ನೈಜಸ್ಥಿತಿಯನ್ನು ತಲುಪಬೇಕು.

ನಮ್ಮ ಸ್ಥೂಲ ಶರೀರ ಪ್ರತಿಸಲ ಹುಟ್ಟಿದಾಗ ಬದಲಾಗುತ್ತದೆ. ಸೂಕ್ಷ್ಮಶರೀರ  ಸೃಷ್ಟಿಯಿಂದ ಪ್ರಳಯಕಾಲದ ತನಕ ಇದ್ದು, ಪ್ರಳಯದಲ್ಲಿ ನಾಶವಾಗುತ್ತದೆ. ಲಿಂಗಶರೀರ ಜೀವಕ್ಕೆ ಅನಾದಿಕಾಲದಿಂದ ಆಂಟಿಕೊಂಡಿರುವುದು. ಈ ಲಿಂಗಶರೀರ ಬೀಳುವತನಕ ಜೀವ ಭೋಗಕ್ಕೆ ಅಂಟಿಕೊಂಡಿರುತ್ತದೆ. ಈ ಲಿಂಗಶರೀರದ ಒಳಗಿರುವ ಜೀವನನ್ನೇ ಇಲ್ಲಿ ‘ಹರಃ ಎಂದಿದ್ದಾರೆ. ಅಂದರೆ  ಯಾರು  ಆನಂದವನ್ನು ತೊರೆದು, ಸಂಸಾರದ ದುಃಖವನ್ನೇ ನಿಜವಾದ ಬದುಕು ಎಂದು ಬದುಕುತ್ತಿರುತ್ತಾನೋ (ಜಹಾತಿ-ರಂ  ಹರಃ), ಅವನೇ ಅರಿವು ಬಂದಾಗ ಜ್ಞಾನಾನಂದ ಸ್ವರೂಪನಾಗುತ್ತಾನೆ (ಹಂ-ರಂ ಹರಃ).

[ಹರಃ ಎನ್ನುವುದು ಅದ್ಭುತವಾದ ಪದ. ಇಂದು ಹರಃ ಎಂದರೆ ‘ಶಿವ ಅಥವಾ ಸಂಹಾರಶಕ್ತಿ’ ಎನ್ನುವ ಅರ್ಥದಲ್ಲಷ್ಟೇ ಕಾಣುತ್ತಾರೆ. ಆದರೆ ಉಪನಿಷತ್ತಿನಲ್ಲಿ ಈ  ಪದಕ್ಕೆ ಅನೇಕ ಅರ್ಥಗಳಿವೆ. ಬೇರೆಬೇರೆ ಸಂದರ್ಭ-ಸನ್ನಿವೇಶದಲ್ಲಿ(Context) ಈ ಪದವನ್ನು ಬೇರೆಬೇರೆ ಅರ್ಥದಲ್ಲಿ ಬಳಸುವುದನ್ನು ನಾವು ವೇದದಲ್ಲಿ ಕಾಣಬಹುದು. ಯಾರು ಜಗತ್ತನ್ನು ಸಂಹಾರ(ಹರತಿ) ಮಾಡುತ್ತಾನೋ ಅವನು ಹರಃ; ಯಾರು ಈ ಜಗತ್ತನ್ನು ಸೃಷ್ಟಿ ಮಾಡುತ್ತಾನೋ(ಆಹರತಿ) ಅವನು ಹರಃ; ಯಾರು ಸೃಷ್ಟಿ-ಸಂಹಾರದ ಮೂಲಕ ಪ್ರಪಂಚದಲ್ಲಿ ವಿಹರಿಸುತ್ತಾನೋ(ವಿಹರತಿ), ಅವನು ಹರಃ, ಯಾರು ಆನಂದವನ್ನು ಬಿಟ್ಟು ದುಃಖವನ್ನೇ ಜೀವನ ಎಂದುಕೊಂಡಿದ್ದಾನೋ(ರಂ-ಜಹಾತಿ) ಅವನು ಹರಃ, ಯಾರು ಜ್ಞಾನಾನಂದ ಸ್ವರೂಪನೋ(ಹಂ-ಜ್ಞಾನ, ರಂ-ಆನಂದ) ಅವನು ಹರಃ. ಹೀಗೆ ಒಂದು ಪದಕ್ಕೆ ಭಗವಂತನ ಪರವಾಗಿ, ಜೀವನ ಪರವಾಗಿ ಅನೇಕ ಅರ್ಥಗಳಿವೆ. ಮೇಲಿನ ಶ್ಲೋಕದಲ್ಲಿ  ಹರಃ ಎನ್ನುವ ಪದ ‘ಜೀವ ಎನ್ನುವ ಅರ್ಥದಲ್ಲಿ ಬಳಕೆಯಾಗಿರುವುದನ್ನು ನಾವು ಗಮನಿಸಬೇಕು].

ಹೀಗೆ ಕ್ಷರವಾಗಿರುವ ಶರೀರದ ಒಳಗಿರುವ ಅಕ್ಷರನಾದ ಆತ್ಮನನ್ನು ಸರ್ವಸ್ವತಂತ್ರನಾದ  ಭಗವಂತ ನಿಯಂತ್ರಿಸುತ್ತಾನೆ. ಅಂತಹ ಭಗವಂತನ ಅರಿವಿಲ್ಲದೇ ಯಾವುದೂ ಸಾಧ್ಯವಾಗುವುದಿಲ್ಲ. ಇಲ್ಲಿ ‘ಕ್ಷರಾತ್ಮಾನಾವೀಶತೇ ದೇವ ಏಕಃ’ ಎಂದು ವ್ಯಾಕರಣವನ್ನು ಮುರಿದು ಹೇಳಿರುವ ಮಾತನ್ನು ಕಾಣುತ್ತೇವೆ. ವಿಶಿಷ್ಟವಾದ ಅರ್ಥವನ್ನು ಹೇಳುವುದಕ್ಕಾಗಿಯೇ ಪ್ರಾಚೀನಶಾಸ್ತ್ರಜ್ಞರು ಈ ರೀತಿ ಪ್ರಯೋಗಮಾಡುವುದು ವಿಶೇಷ. ಇಲ್ಲಿ ‘ದೇವ ಏಕಃ’ ಎನ್ನುವುದು ಏಕವಚನವಾದರೆ, ‘ಈಶತೇ’ ಎನ್ನುವ ಕ್ರಿಯಾಪದ ಬಹುವಚನದಲ್ಲಿದೆ. ಅಂದರೆ ‘ದೇವನು ಸೃಷ್ಟಿಸುತ್ತಾರೆ ಎಂದು ಹೇಳಿದ್ದಾರೆ. ಏನಿದರ ಅರ್ಥ?  ಬನ್ನಿ, ಈ ಕುರಿತು ವಿಶ್ಲೇಷಣೆ ಮಾಡೋಣ:

ಭಗವಂತ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆದರೆ ಅವನು ಒಂದೇ ರೂಪದಿಂದ ಸೃಷ್ಟಿ ಮಾಡುವುದಿಲ್ಲ. ಅವನಿಗೆ ಅನಂತ ರೂಪಗಳು. ತನ್ನ ಅನಂತ ರೂಪಗಳಿಂದ ಒಂದೊಂದು ವಸ್ತುವಿನ ಒಳಗೂ ಒಂದೊಂದು ರೂಪದಿಂದ ಇದ್ದು,  ಒಂದೊಂದು ವಸ್ತುವನ್ನು ಒಂದೊಂದು ರೂಪದಿಂದ ಸೃಷ್ಟಿ ಮಾಡುತ್ತಾನೆ. ಅನೇಕ ರೂಪಗಳಿರುವುದರಿಂದ, ಅನೇಕ ರೂಪಗಳಿಂದ ಸೃಷ್ಟಿಯಾಗುವುದರಿಂದ, ಇಲ್ಲಿ ಬಹುವಚನದ ಬಳಕೆ ಮಾಡಲಾಗಿದೆ. ರೂಪಗಳು ಹಲವಾದರೂ ಕೂಡಾ, ಅವನ ಎಲ್ಲಾ ರೂಪಗಳೂ ಅಖಂಡವಾಗಿರುವ ಒಂದೇ ಶಕ್ತಿ. ಅಭಿವ್ಯಕ್ತಿ ಬಹುವಿಧ(ಬಹುವಚನ), ವ್ಯಕ್ತಿ ಏಕವಿಧ(ಏಕವಚನ). ಹೀಗಾಗಿ ಇಲ್ಲಿ ಏಕವಚನದ ಕರ್ತೃ, ಬಹುವಚನದ ಕ್ರಿಯಾಪದ ಬಳಕೆಮಾಡಿ ಹೇಳಲಾಗಿದೆ. [ಇಂತಹ ಬಳಕೆ ಕನ್ನಡ ಭಾಷೆಯಲ್ಲೂ ಕಾಣಸಿಗುತ್ತದೆ. ಉದಾಹರಣೆಗೆ: ‘ದೇವರು ದೊಡ್ಡವನು’ ಎನ್ನುವ ಮಾತು. ನಾವು ದೇವನು ದೊಡ್ಡವನು ಎಂದು ಹೇಳುವುದಿಲ್ಲ. ಕಾರಣ ನಮ್ಮಲ್ಲಿ ಭಗವಂತನ ಬಗೆಗಿರುವ ಎರಡು ಭಾವನೆಗಳು. ಭಗವಂತ ಸರ್ವಸಮರ್ಥ ಎನ್ನುವ  ಗೌರವಪೂರ್ಣತೆಯನ್ನು ‘ದೇವರು’ ಎನ್ನುವ  ಬಹುವಚನ ಸೂಚಿಸಿದರೆ,  ಭಗವಂತನ ಜೊತೆಗಿನ ನಮ್ಮ ಪ್ರೀತಿ, ಆತ್ಮೀಯತೆಯನ್ನು ‘ದೊಡ್ಡವನು ಎನ್ನುವ ಏಕವಚನ ಸೂಚಿಸುತ್ತದೆ.  ಹೀಗೆ ಆಡುಮಾತಿನ ಪ್ರಯೋಗದ ಅರ್ಥ ತಿಳಿಯದೇ ಕೇವಲ ಕೋಶನೋಡಿ ಉಪನಿಷತ್ತಿನ ವ್ಯಾಖ್ಯಾನ ಮಾಡಿದರೆ ಒಂದೊಂದು ವ್ಯಾಖ್ಯಾನ ಒಂದೊಂದು ರೀತಿಯಾಗಿರುತ್ತದೆ. ಸಂಸ್ಕೃತ ಆಡುಭಾಷೆಯಾಗಿದ್ದಾಗ ಇಂತಹ ಸ್ವತಂತ್ರ ಶಬ್ದಪ್ರಯೋಗವನ್ನು ಪ್ರಾಚೀನ ಋಷಿಗಳು ಪ್ರಯೋಗಮಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಇಂತಹ ಆಡುಮಾತಾಗಿದ್ದ ಸಂಸ್ಕೃತವನ್ನು ನಾವು ಗ್ರಾಂಥಿಕ ಭಾಷೆಯಂತೆ ಅರ್ಥಮಾಡಿಕೊಳ್ಳಲು  ಪ್ರಯತ್ನಪಟ್ಟರೆ ಉಪನಿಷತ್ತು ನಮಗೆ ಅರ್ಥವಾಗುವುದಿಲ್ಲ. ಉಪನಿಷತ್ ಕಾಲದ ಋಷಿಗಳ ಒಂದೊಂದು ಮಾತಿನ ಹಿಂದೆಯು ಒಂದು ಗಾಢವಾದ ಅನುಭವ ನಮಗೆ ಕಾಣುತ್ತದೆ. ಒಂದೊಂದು ಶಬ್ದದಲ್ಲೂ ಆಳವಾದ(depth) ಜ್ಞಾನ ಭಂಡಾರ ಅಲ್ಲಿ ಅಡಗಿರುವುದು ವಿಶೇಷ].

    ನಾವು ಯಾವ ರೀತಿ ಈ ಕ್ಷರವಾದ ಜಡದ ಬೇಲಿಯಿಂದ ಕಳಚಿಕೊಳ್ಳುವುದು? ಅದಕ್ಕಾಗಿ ಏನು ಮಾಡಬೇಕು ಎಂದರೆ ಇಲ್ಲಿ ಹೇಳುತ್ತಾರೆ: ‘ತಸ್ಯ ಅಭಿಧ್ಯಾನಾತ್ ಯೋಜನಾತ್’ ಎಂದು.  ಈ ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಏನಿದೆ, ಅದನ್ನು ನಮ್ಮ  ಇಡೀ ಬದುಕಿನ ಪ್ರತಿಯೊಂದು ಕ್ರಿಯೆಯಲ್ಲಿ  ಸಂಯೋಗಮಾಡಿ ಬದುಕುವುದನ್ನು ನಾವು ಕಲಿಯಬೇಕು. ಆಡುವ ಮಾತು ದೇವರ ಸ್ತೋತ್ರವಾಗಬೇಕು, ನಡೆ ಎಲ್ಲಾ ದೇವರ ಪ್ರದಕ್ಷಿಣೆಯಾಗಬೇಕು. ಹೀಗೆ ನಮ್ಮ ಸಮಸ್ತ ಕ್ರಿಯೆಯೂ ದೇವರ ಪೂಜೆ ಎಂದು ನಮ್ಮ ಪ್ರತಿಯೊಂದು ನಡೆಯಲ್ಲೂ ದೇವರನ್ನು ಸಂಯೋಜನೆ ಮಾಡಿದಾಗ, ಇಡೀ ಬದುಕೇ ದೇವರ ಪೂಜೆಯಾಗುತ್ತದೆ. ಇಲ್ಲಿ ಅತ್ಯಂತ ಮುಖ್ಯವಾದ ಅಂಶ ಏನೆಂದರೆ, ಆ ಪರತತ್ತ್ವದಲ್ಲಿ ನಂಬಿಕೆ ಮತ್ತು ಭಕ್ತಿ. ಸತ್ಯವನ್ನು ತಿಳಿದುಕೊಳ್ಳಬೇಕು ಎನ್ನುವ ಛಲದಿಂದ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ ನಿರಂತರ ಚಿಂತನೆಮಾಡಿದರೆ ಸಮಸ್ತ ಮಾಯೆಯೂ  ನಿವೃತ್ತಿಯಾಗಿ ವಿಶ್ವರಹಸ್ಯ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ವೇದದಲ್ಲಿ ಹೇಳುವಂತೆ: ‘ಭಿದ್ಯತೇ ಹೃದಯಗ್ರಂಥಿಃ   ಛಿದ್ಯಂತೇ ಸರ್ವ ಸಂಶಯಾಃ ಕ್ಷೀಯಂತೇ ಚಾಸ್ಯ ಕರ್ಮಾಣಿ, ತಸ್ಮಿನ್ ದೃಷ್ಟೇ ಪರಾವರೇ’ ಈ ಸ್ಥಿತಿಯಲ್ಲಿ ನಾವು ಎಲ್ಲಾ ಮಾಯೆಯಿಂದ ಕಳಚಿಕೊಂಡು ನಿಚ್ಚಳವಾದ ಸತ್ಯದ ಸಾಕ್ಷಾತ್ಕಾರವನ್ನು ಪಡೆಯುತ್ತೇವೆ.  ಇಲ್ಲಿ ‘ಮಾಯೆ’  ಎಂದರೆ ಯಾವುದೂ ಸ್ಪಷ್ಟವಾಗಿ ತಿಳಿಯದೇ ಇರುವ ಗೊಂದಲದ ಸ್ಥಿತಿ.  ಎರಡು ರೀತಿಯ ಮಾಯೆ ನಮ್ಮನ್ನು ಸದಾ ಆವರಿಸಿರುತ್ತದೆ. ಒಂದು ಸ್ವರೂಪಾಚ್ಛಾದಿತ ಮಾಯೆ. ಅಂದರೆ ನನಗೆ ನನ್ನನ್ನು ಏನು ಎಂದು ಪರಿಚಯ ಇಲ್ಲದಂತೆ ಮಾಡುವ ಪರದೆ. ಇನ್ನೊಂದು ಪರಮಾಚ್ಛಾಧಿತ ಮಾಯೆ. ಅಂದರೆ  ಭಗವಂತನ ಬಗೆಗಿನ ಪರದೆ. ಈ ಎರಡು ಪರದೆಗಳು ಸರಿದಾಗ ಎಲ್ಲವೂ ನಿಚ್ಚಳ. ಹೀಗೆ ನಿರಂತರ ಭಗವಂತನ ಬಗೆಗಿನ ಎಚ್ಚರ, ಭಕ್ತಿ ಹಾಗು ಧ್ಯಾನದಿಂದ ಜೀವ ಸಾಕ್ಷಾತ್ಕಾರವನ್ನು ಹೊಂದಬಹುದು.

 

ಜ್ಞಾತ್ವಾ ದೇವಂ ಸರ್ವಪಾಶಾಪಹಾನಿಃ   ಕ್ಷೀಣೈಃ ಕ್ಲೇಶೈರ್ಜ್ಜನ್ಮಮೃತ್ಯುಪ್ರಹಾಣಿಃ

ತಸ್ಯಾಭಿಧ್ಯಾನಾತ್ತೃತೀಯಂ ದೇಹಭೇದೇ  ವಿಶ್ವೈಶ್ವರ್ಯ್ಯಂ ಕೇವಲ ಆಪ್ತಕಾಮಃ ೧.೧೧

 

ಈ ಪ್ರಪಂಚವನ್ನು ಧಾರಣೆಮಾಡಿರುವ ಆ ಭಗವದ್ ಶಕ್ತಿಯನ್ನು ತಿಳಿದಾಗ ಸಮಸ್ತ ಬಂಧನದ ಕಟ್ಟುಗಳು ಕಳಚಿಕೊಳ್ಳುತ್ತವೆ. ಜೀವ ಪಂಜರದಿಂದ ಪಾರಾದ ಪಕ್ಷಿಯಂತೆ ಸ್ವತಂತ್ರನಾಗುತ್ತಾನೆ. ಇಲ್ಲಿ ಮುಖ್ಯವಾದ ವಿಷಯ ಏನೆಂದರೆ, ಪಂಜರದಿಂದ ಹೊರಹೋಗುವುದು ಮತ್ತೆ ಪುನಃ ಹೊಸ ಪಂಜರವನ್ನು ಸೇರುವುದಕ್ಕಾಗಿ ಅಲ್ಲ. ಮಹಾಭಾರತದಲ್ಲಿ ಒಂದು ಮಾತಿದೆ: ‘ಪತನಾಂತಾಃ ಸಮುಚ್ಚ್ರಯಾಃ ಸಂಯೋಗಾ ವಿಪ್ರಯೋಗಾಂತಾಃ... (೧೧.೨.೩) ಮೇಲೇರಿದವು ಕೆಳಗೆ ಬೀಳುತ್ತವೆ. ಸೇರುವಿಕೆಯು ವಿಯೋಗದಲ್ಲಿ ಕೊನೆಯಾಗುತ್ತದೆ, ಆ ರೀತಿ ಪಂಜರದಿಂದ ಹೊರ ಹೋಗುವುದು ಮರಳಿ ಪಂಜರವನ್ನು ಸೇರುವುದಕ್ಕಾಗಿ ಅಲ್ಲ. ಒಮ್ಮೆ ಕಳಚಿಕೊಂಡ ಮೇಲೆ ಯಾವ ಕಟ್ಟೂ ನಮ್ಮನ್ನು ಬಂಧಿಸಬಾರದು. ‘ಕ್ಷೀಣೈಃ ಕ್ಲೇಶೈರ್ಜ್ಜನ್ಮಮೃತ್ಯುಪ್ರಹಾಣಿಃ’ – ಎಂದೂ ಸಾಯದ ಸ್ಥಿತಿಯನ್ನು ಹೊಂದುವುದು. ಅಂದರೆ ಮರಳಿ ಪಾಂಚಭೌತಿಕವಾದ ಶರೀರದಿಂದ ಹುಟ್ಟದ ಸ್ಥಿತಿಯನ್ನು ಜೀವ ಭಗವಂತನನ್ನು ತಿಳಿದಾಗ ತಲುಪುತ್ತಾನೆ.

ಇಲ್ಲಿ ಜೀವನಿಗೆ ಕರ್ಮದ ಬಂಧನದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ‘ಕರ್ಮದ ಕ್ಲೇಶ’ ಇರುವ ತನಕ ಜ್ಞಾನಿ ಕೂಡಾ ಅದನ್ನು ಅನುಭವಿಸಬೇಕಾಗುತ್ತದೆ. ಕರ್ಮದಲ್ಲಿ ಮುಖ್ಯವಾಗಿ ಸಂಚಿತಕರ್ಮ ಮತ್ತು ಪ್ರಾರಾಬ್ಧಕರ್ಮ ಎಂದು ಎರಡು ವಿಧ. ಸಂಚಿತಕರ್ಮ ಎಂದರೆ ಅದು ಬತ್ತಳಿಕೆಯಲ್ಲಿನ ಬಾಣದಂತೆ. ಭಗವಂತನ ಸಾಕ್ಷಾತ್ಕಾರವಾದಾಗ ಈ ಕರ್ಮ ಭಸ್ಮವಾಗುತ್ತದೆ. ಆದರೆ ಪ್ರಾರಾಬ್ಧಕರ್ಮ ಬಿಟ್ಟ ಬಾಣದಂತೆ. ಅದನ್ನು ಅನುಭವಿಸಿಯೇ ತೀರಬೇಕು. ಹೀಗಾಗಿ  ಅಪರೋಕ್ಷಜ್ಞಾನಿಯೂ ಕೂಡಾ  ಪ್ರಾರಾಬ್ಧಕರ್ಮ ಕಳೆಯುವತನಕ ಹುಟ್ಟು-ಸಾವಿನ ಚಕ್ರದಲ್ಲಿ ಸುತ್ತುತ್ತಿರುತ್ತಾನೆ.

ಒಮ್ಮೆ ಭಗವಂತನ ಸಾಕ್ಷಾತ್ಕಾರವಾಗಿ, ಕರ್ಮದ ಕ್ಲೇಶದಿಂದ ಕಳಚಿಕೊಂಡ ಜೀವ, ಹುಟ್ಟು-ಸಾವಿನ ಆಚೆಗಿನ ‘ತೃತೀಯ ಸ್ಥಿತಿಯನ್ನು ಹೊಂದುತ್ತಾನೆ. ಇದು ಯಾವುದೇ ಪಾಂಚಭೌತಿಕ ಸಂಸ್ಪರ್ಶ ಇಲ್ಲದ ಕೇವಲ ಜ್ಞಾನಾನಂದ ಸ್ವರೂಪ ಸ್ಥಿತಿ. ಅದು ಪರಿಪೂರ್ಣವಾದ ‘ಐಶ್ವರ್ಯ’ದ ಸ್ಥಿತಿ. ಇಲ್ಲಿ ಐಶ್ವರ್ಯ ಎಂದರೆ ಒಡೆತನ.  ತಾನು ಬಯಸಿದ್ದನ್ನು ಪಡೆಯಬಲ್ಲ ಸ್ಥಿತಿ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಹೇಳುವಂತೆ(೪.೪.೧೭)- ‘ಜಗದ್ವ್ಯಾಪಾರವರ್ಜಮ್’ ಪ್ರಪಂಚವನ್ನು ಸೃಷ್ಟಿಮಾಡುವ ಕ್ರಿಯೆಯನ್ನು ಬಿಟ್ಟು ಉಳಿದ ಎಲ್ಲಾ ಐಶ್ವರ್ಯವನ್ನು  ಜೀವ ಈ ತೃತೀಯ ಸ್ಥಿತಿಯಲ್ಲಿ ಹೊಂದುತ್ತಾನೆ.

 

ಸ್ವದೇಹಮರಣಿಂ[1] ಕೃತ್ವಾ ಪ್ರಣವಂ ಚೋತ್ತರಾರಣಿಮ್

ಧ್ಯಾನನಿರ್ಮಥನಾಭ್ಯಾಸಾದೇವಂ ಪಶ್ಯೇನ್ನಿಗೂಢವತ್ ೧.೧೪

 

ಭಗವಂತನನ್ನು ಕಂಡು ಆತ್ಮಸಾಕ್ಷಾತ್ಕಾರ ಹೊಂದಿ ಮೋಕ್ಷವನ್ನು ಪಡೆಯಬಹುದು ಎನ್ನುವುದನ್ನು ತಿಳಿದೆವು. ಆದರೆ ನಾವು ಭಗವಂತನನ್ನು ಕಾಣುವುದು ಹೇಗೆ? ಅದಕ್ಕಾಗಿ ಏನು ಮಾಡಬೇಕು? ಈ ಪ್ರಶ್ನೆಗೆ ಶ್ವೇತಾಶ್ವತರರು ಇಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: ‘ಯಾವ ರೀತಿ ‘ಅರಣಿ’ ಮಥನದಿಂದ ಅಗ್ನಿ ಹುಟ್ಟುತ್ತದೋ, ಹಾಗೇ ನಮ್ಮ ಹಾಗೂ ‘ಪ್ರಣವ’ದ ಮಧ್ಯ ಮಥನ ನಡೆಯಬೇಕು. ಈ ಮಥನದಿಂದ ಭಗವದ್ಪ್ರಜ್ಞೆ  ಹುಟ್ಟಿ ಸಾಕ್ಷಾತ್ಕಾರವಾಗುತ್ತದೆ’ ಎಂದು.  

ಹಿಂದೆ ಯಜ್ಞ ಮಾಡುವಾಗ ಶಮೀ ಮತ್ತು ಅರಣಿ(ಅರಳಿ) ಸಮಿಧೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. (ಯಜ್ಞದಲ್ಲಿ ಅರಳಿಯ ಸಮಿಧೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿಧೆಯನ್ನು ಕಾಷ್ಠವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಟ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣಗಳಿವೆಯೋ ಹಾಗೇ ಅಗ್ನಿಯಲ್ಲಿ ಏಳು ಬಣ್ಣಗಳಿವೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣಗಳನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣಗಳೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥ ಸಮಿಧೆ ಒಂದು ಪ್ರಮುಖ ಸಾಧನ). ಇಲ್ಲಿ ಶ್ವೇತಾಶ್ವತರರು ನಮ್ಮ ಉಪಾಸನೆ ಅರಣಿ ಮಥನದಂತಿರಬೇಕು ಎಂದಿದ್ದಾರೆ. ವೇದದಲ್ಲಿ ಉಪಾಸನೆಯನ್ನು ‘ಸೋಪಾಸನಾ ಚ ದ್ವಿವಿಧಾ ಶಾಸ್ತ್ರಾಭ್ಯಾಸ ಸ್ವರೂಪಿಣೀ ಧ್ಯಾನ ರೂಪಾ ಪರಾಚೈವ ತದಂಗಂ ಧಾರಣಾದಿಕಮ್’ ಎಂದು ವಿವರಿಸಿದ್ದಾರೆ. ಹೀಗೆ ಶ್ರವಣ-ಮನನ-ನಿದಿಧ್ಯಾಸನ ನಿರಂತರವಾಗಿ ನಮ್ಮಲ್ಲಿ ನಡೆಯುತ್ತಿರಬೇಕು.

ಇಲ್ಲಿ ‘ನಮ್ಮ ಹಾಗೂ ಪ್ರಣವದ ನಡುವೆ ಮಥನ ನಡೆಯಬೇಕು’ ಎಂದಿದ್ದಾರೆ. ಪ್ರಣವ ಎಂದರೆ ‘ಪ್ರಕೃಷ್ಟವಾದ-ನವ’. ಅಂದರೆ ನಾವು ಭಗವಂತನನ್ನು ಸ್ತುತಿಸಬೇಕಾದ ಶಬ್ದಗಳಲ್ಲೇ ಅತ್ಯಂತ ಶ್ರೇಷ್ಠವಾದ ಸ್ತೋತ್ರ ಪ್ರಣವ. ಅದೇ ಓಂಕಾರ. ಭಗವಂತನನ್ನು ಸ್ತೋತ್ರಮಾಡಲು ಓಂಕಾರಕ್ಕಿಂತ ಶ್ರೇಷ್ಠವಾದ ಸ್ತೋತ್ರ ಇನ್ನೊಂದಿಲ್ಲ. ಇದೊಂದು ಬೀಜಾಕ್ಷರ. ಇದರಲ್ಲಿ ಎಂಟು ಅಕ್ಷರಗಳಿವೆ. ಅವುಗಳಲ್ಲಿ ಮುಖ್ಯವಾಗಿ ಕಿವಿಗೆ ಕೇಳಿಸುವ ಮೂರು ಅಕ್ಷರಗಳೆಂದರೆ ಅ, ಉ ಮತ್ತು ಮ.  ಈ ಮೂರು ಅಕ್ಷರಗಳೇ ಬೆಳೆದು ಭೂಃ, ಭುವಃ, ಸುವಃ ಎನ್ನುವ ಮೂರು ಶಬ್ದಗಳ ವ್ಯಾಹೃತಿಗಳಾದವು. ಈ ಮೂರು ಶಬ್ದಗಳೇ ಬೆಳೆದು ಗಾಯತ್ರಿಯ ಮೂರು ಪಾದಗಳಾದವು. ಆ ಮೂರು ಪಾದಗಳೇ ಬೆಳೆದು ಪುರುಷಸೂಕ್ತದ ಮೂರು ವರ್ಗಗಳಾದವು. ಈ ವರ್ಗಗಳೇ ಬೆಳೆದು ಮೂರು ವೇದಗಳಾದವು. ಹೀಗಾಗಿ ಓಂಕಾರ ಅಥವಾ ‘ಪ್ರಣವ ಎಂದರೆ ಅದು ಇಡೀ ವೇದದ, ವೈದಿಕ ವಾಙ್ಮಯದ ಬೀಜಾಕ್ಷರ.[ಓಂಕಾರದ ಕುರಿತು ಹೆಚ್ಚಿನ ವಿವರವನ್ನು ಅಧ್ಯಾಯ ಒಂದರ ಪರಿಶಿಷ್ಠದಲ್ಲಿ ನೀಡಲಾಗಿದೆ]  ಹೀಗೆ ಇಲ್ಲಿ ಋಷಿಗಳು ‘ನಮ್ಮೊಳಗೆ ವೇದದ, ವೈದಿಕ ವಾಙ್ಮಯದ ನಿರಂತರ ಮಥನ ನಡೆಯಬೇಕು’ ಎಂದಿದ್ದಾರೆ.  ಮಥನ ಎಂದರೆ ವೇದಾರ್ಥದ ನಿರಂತರ ಚಿಂತನೆ. ಒಮ್ಮೆಗೇ ವೇದ ನಮಗೆ ಅರ್ಥವಾಗುವುದಿಲ್ಲ. ಅದು ಸತ್ಯವನ್ನು ಕಂಡವರ ಅನುಭವ. ಸತ್ಯವನ್ನು ಕಾಣದ ನಮಗೆ ಅದು ಅರ್ಥವಾಗಬೇಕಾದರೆ ವೇದದ ಅಂತರಂಗವನ್ನು ಅರಿಯುವ ನಿರಂತರ ಪ್ರಯತ್ನವನ್ನು ನಾವು ಮಾಡಬೇಕು. ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಂಡಾಗ, ಭಗವಂತನ ಅನುಗ್ರಹದಿಂದ ವೇದಾರ್ಥ ನಮಗೆ ಸ್ಫುರಣವಾಗುತ್ತದೆ. ಇದಕ್ಕಾಗಿ ನಿರಂತರ ಮಥನ ಅಗತ್ಯ.  ಈ ರೀತಿ ಮಥನ ಮಾಡಿದಾಗ ಭಗವಂತನೆಂಬ ನಿಗೂಢವಾದ ಕಿಡಿ ವ್ಯಕ್ತವಾಗುತ್ತದೆ.

ವೇದದಲ್ಲಿ ಹೇಳುವಂತೆ: ಘೃತಮಿವ ಪಯಸಿ ನಿಗೂಢಂ ಭೂತೇ ಭೂತೇ ಚ ವಸತಿ ವಿಜ್ಞಾನಮ್ ಸತತಂ ಮಂಥಯಿತವ್ಯಂ ಮನಸಾ ಮಂಥನಾಭೂತೇನ ಭಗವಂತ ಹಾಲಿನಲ್ಲಿ ಅಡಗಿರುವ ಬೆಣ್ಣೆಯಂತೆ ಇಡೀ ಜಗತ್ತಿನಲ್ಲಿ ತುಂಬಿದ್ದರೂ ಕೂಡಾ ಕಾಣುವುದಿಲ್ಲ. ಹೇಗೆ ಹಾಲನ್ನು ಸಂಗ್ರಹಿಸಿ, ಹೆಪ್ಪುಹಾಕಿ, ಕೆನೆಮೊಸರು ಮಾಡಿ, ಕಡೆದಾಗ ಬೆಣ್ಣೆ ಕಾಣುತ್ತದೋ ಹಾಗೇ, ಕಾಣದ ಭಗವಂತನಿಗೆ ಶರಣಾಗಿ, ಅಂತರಂಗದಲ್ಲಿ ನಿರಂತರ ಶಾಸ್ತ್ರದ ಮಥನ ಮಾಡಿದಾಗ ಅವನ ದರ್ಶನ ನಮಗಾಗುತ್ತದೆ.

 

ಸರ್ವವ್ಯಾಪಿನಮಾತ್ಮಾನಂ ಕ್ಷೀರೇ ಸರ್ಪ್ಪಿರಿವಾರ್ಪ್ಪಿತಮ್  

ಆತ್ಮವಿದ್ಯಾತಪೋಮೂಲಂ ತದ್ಬ್ರಹ್ಮೋಪನಿಷತ್ ಪರಂ ತದ್ಬ್ರಹ್ಮೋಪನಿಷತ್ ಪರಂ ಇತಿ ೧.೧೬

 

ಹಾಲಿನಲ್ಲಿ ಬೆಣ್ಣೆ  ಇರುವಂತೆ ಸರ್ವವ್ಯಾಪ್ತನಾಗಿ ಪ್ರಪಂಚದಲ್ಲಿ ತುಂಬಿರುವ ಭಗವಂತನನ್ನು   ಅಧ್ಯಾತ್ಮದ ಜ್ಞಾನ ಹಾಗೂ ನಿರಂತರ ಚಿಂತನೆಯಿಂದ ನಾವು ನಮ್ಮೊಳಗೇ ಕಾಣಬಹುದು. ನಾವು ಯಾರ ಹತ್ತಿರ ಹಠ ಮಾಡಿದರೂ ನಮ್ಮ ಕೆಲಸ ಆಗದೇ ಉಳಿಯಬಹುದು, ಆದರೆ ಭಗವಂತನಲ್ಲಿ ಹಠ ಮಾಡಿದರೆ ಅವನು ನಮ್ಮನ್ನು ನಿರಾಸೆಗೊಳಿಸಲಾರ. ಹಾಗಾಗಿ ‘ಓ ಭಗವಂತ, ನನಗೆ ನೀನು ಬೇಕು, ನೀನು ಬರಬೇಕು ಎಂದು  ನಾವು ಜ್ಞಾನಪೂರ್ವಕವಾಗಿ ಅವನಲ್ಲಿ ಹಠ ಮಾಡಬೇಕು. ಹೀಗೆ ಅರಿವು ಮತ್ತು ಅದರ ಹಿಂದಿನ ತಪಸ್ಸೆಂಬ ಮಥನದಿಂದ ಯಾವ ಒಳಗಿನ ಸತ್ಯವನ್ನು ನಾವು ಕಾಣಬಲ್ಲೆವೋ, ಅದೇ ಬ್ರಹ್ಮ.  ಅದೇ ಸಮಸ್ತ ಉಪನಿಷತ್[2] ವೇದ್ಯ ತತ್ತ್ವ. ಇದನ್ನು ತಿಳಿದಾಗ ಜೀವ ಹುಟ್ಟು-ಸಾವಿನ ಚಕ್ರಭ್ರಮಣದಿಂದ ಬಿಡುಗಡೆಹೊಂದಿ ಆನಂದದ ಸ್ಥಿತಿಯನ್ನು ಹೊಂದಬಲ್ಲ.

[ಈ ಶ್ಲೋಕದಲ್ಲಿ  ತದ್ಬ್ರಹ್ಮೋಪನಿಷತ್ ಪರಂ’  ಎಂದು ಎರಡು ಬಾರಿ ಹೇಳಲಾಗಿದೆ. ಇದು ಅಧ್ಯಾಯ ಕೊನೆಗೊಂಡಿತು ಎಂದು ಸೂಚಿಸುವುದಕ್ಕಾಗಿ ಹೇಳುವ ಕ್ರಮವಾಗಿದೆ.]

 

******************

 

 

 




[1] ಆತ್ಮಾನಮರಣಿಂ

[2] ಉಪನಿಷತ್ ಎನ್ನುವ ಪದಕ್ಕೆ  ‘ಉಪಹ್ವರೇ-ನಿಷೀದತೆ’, ಅಂದರೆ ಅತ್ಯಂತ ದೊಡ್ಡ ರಹಸ್ಯ ಎನ್ನುವ ಇನ್ನೊಂದು ಅರ್ಥವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ